ಕೋವಿಡ್ ಲಸಿಕೆಯ ಲಾಭ ಪಡೆಯುವುದು ನಮ್ಮೆಲ್ಲರ ಕರ್ತವ್ಯ: ಡಾ.ಕೆ.ಸುಧಾಕರ್

Update: 2021-03-25 12:55 GMT

ಬೆಂಗಳೂರು, ಮಾ.25: ಲಸಿಕೆ ಹಾಕಿಸಿ ಮುನ್ನೆಚ್ಚರಿಕೆಯೂ ಪಾಲಿಸಿ. ಕಳೆದ ವರ್ಷ ಕೊರೋನ ವೈರಾಣುವಿನ ಮೊದಲ ಅಲೆ ಅಪ್ಪಳಿಸಿದಾಗ ಲಸಿಕೆ ನಮಗೆ ಒಂದು ಆಶಾಕಿರಣವಾಗಿತ್ತು. ಆದರೆ ಈಗ ಅದು ವಾಸ್ತವವಾಗಿದೆ. ಇದು ಅಷ್ಟು ಸಾಮಾನ್ಯವಾದ ವಿಷಯವಲ್ಲ, ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಕಂಡು ಹಿಡಿಯುವುದರ ಹಿಂದೆ ನಮ್ಮ ವಿಜ್ಞಾನಿಗಳ ಅಚಲ ತಪಸ್ಸು, ಕಠಿಣ ಪರಿಶ್ರಮ, ನಿರಂತರ ಪ್ರಯತ್ನಗಳಿವೆ. ಉದಾಹರಣೆಗೆ ರೋಟಾ ವೈರಸ್‍ಗೆ ಲಸಿಕೆ ಸಿಗಲು 29 ವರ್ಷ ಬೇಕಾಗಿತ್ತು. ಎಬೋಲಾ ವೈರಸ್‍ಗೆ ಲಸಿಕೆ ಕಂಡುಹಿಡಿಯಲು 20 ವರ್ಷ ಕಾಯಬೇಕಾಯಿತು ಎಂದು ಹೇಳಿದರು.

ಕೊರೋನ ಲಸಿಕೆ ಬರುವ ಮುನ್ನ, ಮಂಪ್ಸ್ ವೈರಸ್‍ಗೆ 4 ವರ್ಷದಲ್ಲಿ ಲಸಿಕೆ ಕಂಡುಹಿಡಿದಿದ್ದೇ ಈವರೆಗೂ ನಮಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ಲಸಿಕೆಯಾಗಿತ್ತು. ಈಗ ಕೊರೋನ ವೈರಸ್‍ಗೆ 1 ವರ್ಷದೊಳಗೆ ಲಸಿಕೆ ಕಂಡುಹಿಡಿಯಲಾಗಿದೆ. ಇಂತಹ ಕಠಿಣ ಪರಿಶ್ರಮದ ಪ್ರತಿಫಲವಾದ ಲಸಿಕೆ ನಮಗೆ ದೊರೆತಿರುವಾಗ ಅದರ ಲಾಭ ಪಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಸುಧಾಕರ್ ತಿಳಿಸಿದರು.

ಲಸಿಕೆ ಪಡೆದುಕೊಂಡ ವ್ಯಕ್ತಿ ತಾನು ಸೋಂಕಿನಿಂದ ಸುರಕ್ಷಿತವಾಗುವುದರ ಜೊತೆಗೆ ಇತರರ ಸುರಕ್ಷತೆಗೂ ಸಹಕಾರಿಯಾಗುವುದರಿಂದ ಲಸಿಕೆ ಪಡೆಯುವುದು ನಮ್ಮ ಸುರಕ್ಷತೆ ಜೊತೆಗೆ ಒಂದು ಸಾಮೂಹಿಕ ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಆದುದರಿಂದ, ಎಲ್ಲ ಅರ್ಹ ವ್ಯಕ್ತಿಗಳು ಈ ಕೂಡಲೇ http://cowin.gov.in ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಿಸಿಕೊಂಡು ಅಥವಾ ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ತಪ್ಪದೆ ಲಸಿಕೆ ಪಡೆಯಬೇಕೆಂದು ಅವರು ಮನವಿ ಮಾಡಿದರು.

ತಮ್ಮ ಮನೆಯಲ್ಲಿ, ನೆರೆಹೊರೆಯಲ್ಲಿ, ಸ್ನೇಹಿತರಲ್ಲಿ ಬಂಧು-ಬಳಗದಲ್ಲಿರುವ ಎಲ್ಲ ಅರ್ಹ ವ್ಯಕ್ತಿಗಳಿಗೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ಸಹ-ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ಪಡೆಯಲು ಅರಿವು ಮೂಡಿಸಿ, ಪ್ರೋತ್ಸಾಹಿಸಿ, ಸಹಾಯ ಮಾಡಿರಿ. ನಾವೆಲ್ಲರೂ ಒಗ್ಗಟ್ಟಿನಿಂದ ಕರ್ನಾಟಕವನ್ನು ಕೊರೋನ ಮುಕ್ತ ರಾಜ್ಯವನ್ನಾಗಿ ಮಾಡೋಣ ಎಂದು ಸುಧಾಕರ್ ಕರೆ ನೀಡಿದರು.

4 ಲಕ್ಷ ಡೋಸ್ ಕೊರೋನ ಲಸಿಕೆ ಆಗಮನ

ನಿನ್ನೆ ತಡರಾತ್ರಿ ರಾಜ್ಯಕ್ಕೆ 4 ಲಕ್ಷ ಡೋಸ್ ಕೊರೋನ ಲಸಿಕೆ ಆಗಮಿಸಿದ್ದು, ಕೇಂದ್ರ ಸರಕಾರದ ಭರವಸೆಯಂತೆ ಈ ವಾರದೊಳಗೆ ಇನ್ನೂ 12 ಲಕ್ಷ ಡೋಸ್ ಲಸಿಕೆ ರವಾನೆಯಾಗಲಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಸಿಕೆಯ ಕೊರತೆ ಉಂಟಾಗದಂತೆ ಕ್ರಮ ಕೈಗೊಂಡಿದ್ದು, ಎಲ್ಲ ಅರ್ಹ ನಾಗರಿಕರು ಕೂಡಲೇ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯಬೇಕೆಂದು ಕೋರುತ್ತೇನೆ.

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News