×
Ad

ರಾಜ್ಯದ ಅಭಿವೃದ್ಧಿಗೆ ಯೋಜನೆಗೆ ಹಣದ ಕೊರತೆಯಿಲ್ಲ: ಸಿಎಂ ಯಡಿಯೂರಪ್ಪ

Update: 2021-03-25 18:50 IST

ಬೆಂಗಳೂರು, ಮಾ.25: ರಾಜ್ಯದ ಅಭಿವೃದ್ಧಿಗೆ ಯೋಜನೆಗೆ ಹಣದ ಕೊರತೆಯಿಲ್ಲ. ಹೀಗಾಗಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಹಣಕಾಸಿನ ಬಗ್ಗೆ ಚಿಂತೆ ಮಾಡದೆ ನಿಗದಿತ ವೇಳೆಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರತ್ತ ಗಮನ ಕೇಂದ್ರೀಕರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಶಾಂತಿನಗರ ಬಸ್ ನಿಲ್ದಾಣದ ಮುಂಭಾಗ ಕೋರಮಂಗಲ ರಾಜಕಾಲುವೆ(ಕೆ-100)ಯನ್ನು ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಜಲ ಮಾರ್ಗ ಅಭಿವೃದ್ಧಿ ಹಾಗೂ ಸೌಂದರೀಕರಣಗೊಳಿಸುವ ಯೋಜನೆಗೆ ಶಂಕುಸ್ಥಾಪನೆಯನ್ನು ಮಾಡಿ ಅವರು ಮಾತನಾಡಿದರು.

ಅಭಿವೃದ್ಧಿ ಯೋಜನೆಗೆ ಹಣಕಾಸಿನ ಕೊರತೆಯಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು.ಈ ಬಗ್ಗೆ ಗುತ್ತಿಗೆದಾರರು ತಲೆ ಕೆಡಿಸಿಕೊಳ್ಳದೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದರತ್ತ ತಮ್ಮ ಗಮನಹರಿಸಬೇಕು. ಇದಕ್ಕೆ ಯಾವುದೇ ರೀತಿಯಲ್ಲಿ ಹಣಕಾಸು ಕೊರತೆಯಾಗದಂತೆ ಗಮನ ವಹಿಸುವ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಿಷನ್ ಬೆಂಗಳೂರು-2020ರಡಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನ ಸಂಪೂರ್ಣ ಚಹರೆ ಬದಲಾಗಲಿದೆ. ಸುಗಮ ಸಾರಿಗೆ, ಸ್ವಚ್ಛ ಪರಿಸರ, ವೈಜ್ಞಾನಿಕ ವಿಧಾನದಲ್ಲಿ ಘನ ತ್ಯಾಜ್ಯ ವಿಲೇವಾರಿ, ರಾಜ ಕಾಲುವೆಗಳ ಸಮಗ್ರ ನಿರ್ವಹಣೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಲಿಕಾನ್‍ಸಿಟಿಯ ಹೃದಯ ಭಾಗದಲ್ಲಿ ಹಾದು ಹೋಗಿರುವ 'ಜಲ ಮಾರ್ಗ'ಕ್ಕೆ ಪ್ರವಾಸಿ ತಾಣದ ಸ್ಪರ್ಶ ನೀಡಿ, ಗತಕಾಲದ ವೈಭವ ಮರುಕಳಿಸುವಂತೆ ಮಾಡುವುದಕ್ಕಾಗಿ 175 ಕೋಟಿ ರೂ.ವೆಚ್ಚದಲ್ಲಿ ಜಲಮಾರ್ಗ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಇದು ಸಾಕಾರಗೊಂಡರೆ, ವರ್ಷಪೂರ್ತಿ ಕೊಳಚೆ ನೀರು ಹರಿಯುತ್ತಿದ್ದ ಕಾಲುವೆಯಲ್ಲಿ ಮಳೆ ನೀರು ಹರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದ ಹಸಿರು ಸಿರಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೊಸ ಉದ್ಯಾನಗಳು ಮತ್ತು ಬೃಹತ್ ವೃಕ್ಷೋದ್ಯಾನಗಳನ್ನೂ ನಿರ್ಮಿಸಲಾಗುವುದು. ಹಾಗೂ ಬೆಂಗಳೂರು ನಗರದ ಸಮಸ್ಯೆಗಳ ಕೂಲಂಕಷ ಅಧ್ಯಯನ ಮಾಡಲಾಗಿದ್ದು, ನಗರವನ್ನು ವಿಶ್ವದರ್ಜೆಗೆ ಏರಿಸುವ ಹಾಗೂ ಬೆಂಗಳೂರಿನಲ್ಲಿ ಅತ್ಯುತ್ತಮ ರಸ್ತೆಗಳ ನಿರ್ಮಾಣದ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ನಗರದೆಲ್ಲೆಡೆ ಇರುವ ರಾಜಕಾಲುವೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಒತ್ತು ನೀಡಿದ್ದು, ಇದನ್ನು ವಿಹಾರಧಾಮಗಳನ್ನಾಗಿ ಮಾಡುವ ಗುರಿ ನೀಡಲಾಗಿದೆ. ಮುಂದಿನ ಹತ್ತು ತಿಂಗಳಿನಲ್ಲಿ ರಾಜಕಾಲುವೆಗಳು ಪ್ರವಾಸಿ ತಾಣಗಳಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಉದಯ ಗರುಡಾಚಾರ್, ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜು, ಎಚ್.ಎಂ.ರಮೇಶ್ ಗೌಡ, ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತೆ  ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ(ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್, ಪಾಲಿಕೆ ಆಡಳಿತಗಾರ ಗೌರವ್ ಗುಪ್ತಾ, ಜಲಮಂಡಳಿ ಅಧ್ಯಕ್ಷ  ಜಯರಾಮ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News