ಸರಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ: ಸಚಿವ ಡಾ.ಕೆ.ಸುಧಾಕರ್

Update: 2021-03-26 11:16 GMT

ಬೆಂಗಳೂರು, ಮಾ.26: ಸರಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ. ಸರಕಾರಕ್ಕೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ. ವಸ್ತುಸ್ಥಿತಿಯ ಅಂಕಿ ಅಂಶವನ್ನು ಮಾತ್ರ ಘೋಷಣೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಸಂಬಂಧ ಯಾವುದೇ ಅಂಕಿ ಅಂಶ ಮುಚ್ಚಿಡುವುದಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ವಿರೋಧ ಪಕ್ಷಗಳ ನಾಯಕರು ಸಲಹೆ, ಸೂಚನೆಗಳನ್ನು ನೀಡಬಹುದು. ಲೋಪಗಳಿದ್ದರೂ ಹೇಳಬಹುದು. ಮುಖ್ಯಮಂತ್ರಿಗಳು ನಿರ್ಧಾರ ಮಾಡಿ ಸರ್ವಪಕ್ಷಗಳ ಸಭೆ ನಡೆಸಿ ಕೋವಿಡ್ ಕುರಿತು ಚರ್ಚಿಸಬಹುದು. ಚರ್ಚೆಯ ವಿಚಾರದಲ್ಲಿ ಮುಕ್ತವಾಗಿದ್ದೇವೆ ಎಂದರು.

ಹಬ್ಬಗಳ ಆಚರಣೆ ವಿಚಾರದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಕಳೆದ ವರ್ಷವೂ ಅನೇಕ ಹಬ್ಬಗಳ ಆಚರಣೆಗಳನ್ನು ನಿಯಂತ್ರಿಸಲಾಗಿತ್ತು. ಈಗಲೂ ಮಾರ್ಗಸೂಚಿ ಹೊರಡಿಸಲಾಗಿದೆ. ಮಣಿಪಾಲ್ ಸಂಸ್ಥೆಯಲ್ಲಿ 704 ಪ್ರಕರಣ ಕಂಡುಬಂದಿದ್ದು, ಅದನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲೆಡೆ ವಹಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 35 ಸಾವಿರ ಪ್ರಕರಣ ಕಂಡುಬಂದಿದೆ. ನಮ್ಮಲ್ಲಿ 2 ಸಾವಿರ ಪ್ರಕರಣ ಪತ್ತೆಯಾಗಿದೆ. ಆದ್ದರಿಂದ ಜನರು ಇದನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷತಾ ಕ್ರಮ ವಹಿಸಬೇಕು. ಯುವಜನರು ತಮ್ಮ ಕುಟುಂಬದ ಹಿರಿಯರನ್ನು ಲಸಿಕೆ ಪಡೆಯಲು ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು ಎಂದು ಕೋರಿದರು.

ತಾಂತ್ರಿಕ ಸಲಹಾ ಸಮಿತಿ ಅನೇಕ ಸಲಹೆ ನೀಡಿದೆ. ಎಲ್ಲ ಬಿಗಿಯಾದ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಯಾವುದೇ ಚಟುವಟಿಕೆಗಳನ್ನು ನಿರ್ಬಂಧಿಸುವುದು ಕಷ್ಟ. ಸೋಂಕಿನ ಬೆಳವಣಿಗೆ ಅವಲೋಕಿಸಿ ಜನಜೀವನಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News