ಕೊರೋನ ಅಂಕಿ-ಅಂಶ ಮುಚ್ಚಿಡುವ ಅವಶ್ಯಕತೆ ಇಲ್ಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-03-27 11:58 GMT

ಬೆಂಗಳೂರು, ಮಾ.27: ಸರಕಾರಕ್ಕೆ ಕೊರೋನ ಅಂಕಿ-ಅಂಶ ಮುಚ್ಚಿಡುವ ಉದ್ದೇಶವಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ರಾಜಕೀಯ ಲಾಭಕ್ಕಾಗಿ ಸುಳ್ಳು ಆಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಡಿರುವ ಆಪಾದನೆಗಳಿಗೆ ಟ್ವೀಟ್‍ನಲ್ಲೇ ಪ್ರತಿಕ್ರಿಯಿಸಿರುವ ಅವರು, ಈ ರೀತಿ ಆಪಾದನೆಗಳನ್ನು ಮಾಡುವುದು ಕೊರೋನ ಯೋಧರಿಗೆ ಮಾಡುವ ಅಪಮಾನ ಎಂದು ಹೇಳಿದ್ದಾರೆ.

ನಮ್ಮ ಸರಕಾರಕ್ಕೆ ಕೊರೋನ ಅಂಕಿಅಂಶಗಳನ್ನು ಮುಚ್ಚಿಡುವ ಉದ್ದೇಶ ಇಲ್ಲ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಕೇವಲ ರಾಜಕೀಯ ಲಾಭಕ್ಕಾಗಿ ಸುಳ್ಳು ಆಪಾದನೆ ಮಾಡುವುದು ಸರಿಯಲ್ಲ. ಇದು ಕಳೆದ ಒಂದು ವರ್ಷದಿಂದ ಹಗಲಿರುಳು ಶ್ರಮಿಸುತ್ತಿರುವ ಕೊರೋನ ಯೋಧರಿಗೆ ಎಸಗಿರುವ ಅಪಮಾನ ಎಂದು ಸುಧಾಕರ್ ಹೇಳಿದ್ದಾರೆ.

ಈ ಅಂಕಿ-ಅಂಶಗಳು ಇ-ಜನ್ಮ ತಂತ್ರಾಂಶದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿರುವ ದತ್ತಾಂಶವಾಗಿದ್ದು, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರು ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ನಡೆಯಬೇಕಿದೆ. ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ಅಂತಿಮ ಅಂಕಿ-ಅಂಶಗಳ ಪ್ರಕಟಣೆ ಇನ್ನೂ ಬಾಕಿಯಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ದಿನ ಬಿಡುಗಡೆ ಮಾಡುವ ಬುಲೆಟಿನ್‍ನಲ್ಲಿ ಪರೀಕ್ಷೆ, ಹೊಸ ಪ್ರಕರಣಗಳು, ಗುಣಮುಖ ಹೊಂದಿರುವವರ ಸಂಖ್ಯೆ, ಮೃತಪಟ್ಟವರ ಸಂಖ್ಯೆ ಎಲ್ಲವನ್ನು ಜಿಲ್ಲಾ ಮಟ್ಟದಿಂದ ತರಿಸಿಕೊಂಡು ಕ್ರೋಡೀಕರಿಸಲಾಗುತ್ತದೆ ಎಂದು ಸುಧಾಕರ್ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೇಕಿದ್ದಲ್ಲಿ ಎಲ್ಲ ಜಿಲ್ಲಾಡಳಿತಗಳಿಂದ ಅಂಕಿ ಅಂಶಗಳನ್ನು ತರಿಸಿಕೊಂಡು ತಾಳೆ ಮಾಡಿ ನೋಡಬಹುದು. ಆದರೆ ಇನ್ನೂ ಅಂತಿಮವಾಗಿಲ್ಲದ ದತ್ತಾಂಶ, ಇನ್ನೂ ಪರಿಷ್ಕರಿಸಬೇಕಾದ ಅಂಕಿ ಅಂಶಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News