ಕ್ರಷರ್ ಮಾಲಕರು ಸ್ಫೋಟಕ ಬಳಸಲು 90 ದಿನದೊಳಗೆ ಪರವಾನಿಗೆ ಪಡೆಯಲು ಸೂಚನೆ: ಸಚಿವ ಮುರುಗೇಶ್ ನಿರಾಣಿ

Update: 2021-03-29 17:19 GMT

ಬೆಂಗಳೂರು, ಮಾ. 29: ನಷ್ಟದಲ್ಲಿರುವ ಗಣಿ ಮತ್ತು ಕ್ರಷರ್ ಉದ್ಯಮವನ್ನು ಪುನಾರಂಭಗೊಳಿಸುವ ನಿಟ್ಟಿನಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು ಗಣಿ ಮಾಲಕರಿಗೆ 90 ದಿನದೊಳಗೆ ಲೈಸೆನ್ಸ್ (ಪರವಾನಿಗಿ) ನೀಡುವ ಮಹತ್ವದ ನಿರ್ಧಾರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೈಗೊಂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ಆರ್.ನಿರಾಣಿ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ ಘಟನೆಯ ನಂತರ ಈ ಉದ್ಯಮ ನಷ್ಟದಲ್ಲಿದ್ದು, ಉದ್ದಿಮೆದಾರರು ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು ಗಣಿ ಸುರಕ್ಷತಾ ಮಹಾನಿರ್ದೇಶನಾಲಯ(ಡಿಜಿಎಂಎಸ್) 90 ದಿನದಲ್ಲಿ ಪರವಾನಿಗಿ ನೀಡಲು ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಈ ಎರಡು ಉದ್ಯಮಗಳು ನಷ್ಟದಲ್ಲಿರುವ ಕಾರಣ ಸರಕಾರದ ಬೊಕ್ಕಸಕ್ಕೆ ಆದಾಯ ಖೋತಾ ಆಗಿದ್ದು, ಸುಮಾರು 300 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಗಣಿ ಹಾಗೂ ಕ್ರಷರ್ ಉದ್ಯಮಕ್ಕೆ ಸ್ಫೋಟಕ ವಸ್ತುಗಳನ್ನು ಬಳಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಕಾರ್ಯ ಮುಂದುವರಿಯಬೇಕಾದರೆ ಇದು ಅತ್ಯಗತ್ಯ. ಈಗ ಸ್ಥಗಿತಗೊಂಡಿರುವ ಕಾರಣ ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಹೊರ ರಾಜ್ಯದವರು ದುಬಾರಿ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಈ ಉದ್ಯಮ ನಡೆಸುವ ಮಾಲಕರು ಇಲಾಖೆಯ ಷರತ್ತು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. 90 ದಿನದಲ್ಲಿ ಲೈಸೆನ್ಸ್ ಪಡೆಯುವುದಾಗಿ ಷರತ್ತುಪತ್ರಕ್ಕೆ ಸಹಿ ಹಾಕಬೇಕು. ಅಲ್ಲದೆ ಹಾಲಿ ಇರುವ ಲೈಸೆನ್ಸ್ ಹೊಂದಿರುವ ಮಾಲಕರ ಜೊತೆ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದ ಅವರು, ಇಂದಿನಿಂದಲೇ ಅನ್ವಯವಾಗುವಂತೆ ಉದ್ದಿಮೆದಾರರು ತಮ್ಮ ಉದ್ಯಮವನ್ನು ಆರಂಭಿಸಬಹುದು. ಪರವಾನಿಗಿ ನೀಡುವಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಷರತ್ತುಗಳನ್ನು ಒಳಪಡಿಸಿ ನೀಡಬಹುದು ಎಂದರು.

ಮಾಲಕರು ನಷ್ಟದಲ್ಲಿರುವುದರಿಂದ ಬ್ಯಾಂಕ್‍ಗಳಿಗೆ ಪ್ರತಿ ತಿಂಗಳು ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಚಟುವಟಿಕೆಗಳು ಸ್ತಬ್ಧಗೊಂಡಿರುವ ಕಾರಣ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ ಎಂದ ಅವರು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಷರ್ ಉದ್ಯಮವನ್ನು ಪುನರಾರಂಭಿಸಲು ಇದು ಅನುಕೂಲವಾಗಲಿದೆ ಎಂದರು.

ರಾಜ್ಯದಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಲ್ಲು ಕ್ವಾರಿ ಉದ್ಯಮಗಳಿವೆ. ಇದರಲ್ಲಿ ಶೇ.10ರಷ್ಟು ಮಾತ್ರ ಉದ್ದಿಮೆದಾರರು ಲೈಸೆನ್ಸ್ ಪಡೆದಿದ್ದರೆ, ಶೇ.90ರಷ್ಟು ಮಂದಿ ಲೈಸೆನ್ಸ್ ಪಡೆದಿಲ್ಲ ಎಂದ ಅವರು, 2 ಕೆಜಿವರೆಗೆ ಸ್ಫೋಟಕಗಳನ್ನು ಬಳಸಲು ಕಾಯ್ದೆಯಲ್ಲಿ ಅವಕಾಶವಿದೆ. 5 ಎಕರೆಗಿಂತ ಕಡಿಮೆ ಜಮೀನಿನಲ್ಲಿ ಗಣಿಗಾರಿಕೆ ಮಾಡುವವರಿಗೆ ಡಿಜಿಎಂಎಸ್ ಪರವಾನಿಗೆಯನ್ನು ಕಡ್ಡಾಯ ಮಾಡಬಾರದೆಂದು ಮನವಿ ಮಾಡಿದ್ದಾರೆ ಎಂದರು.

ಶೀಘ್ರದಲ್ಲೇ ಹೊಸ ಗಣಿಗಾರಿಕೆ ನೀತಿ ಜಾರಿಗೆ ಬರಲಿದೆ. ಇದು ದೇಶಕ್ಕೆ ಅನ್ವಯವಾಗುವಂತಹ ನೀತಿಯಾಗಲಿದೆ. 10 ಲಕ್ಷ ರೂ.ಗಳೊಳಗೆ ಮನೆ ಕಟ್ಟುವವರಿಗೆ ಹಾಗೂ ಪ್ರತಿಯೊಬ್ಬರಿಗೂ ಕೈಗೆಟುವ ದರದಲ್ಲಿ ಮರಳೂ ನೀತಿ ಸೇರಿದಂತೆ ಹತ್ತು ನೀತಿಯನ್ನು ಒಳ್ಳಗೊಳ್ಳಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಗಣಿ ಅದಾಲತ್: ಗಣಿ ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಯು ಎಪ್ರಿಲ್ 17ರಿಂದ  ಜೂ.21ರವರೆಗೆ ರಾಜ್ಯದ 5 ವಿಭಾಗಗಳಲ್ಲಿ ಗಣಿ ಅದಾಲತ್ ನಡೆಸಲಿದೆ. ಎ.17ರಂದು ಬೆಂಗಳೂರಿನಲ್ಲಿ, ಎ.30ಕ್ಕೆ ಬೆಳಗಾವಿ, ಮೇ 5ಕ್ಕೆ ಮೈಸೂರು, ಮೇ 25ಕ್ಕೆ ಕಲಬುರಗಿ ಹಾಗೂ ಜೂನ್ 21ಕ್ಕೆ ಮಂಗಳೂರಿನಲ್ಲಿ ಗಣಿ ಅದಾಲತ್ ನಡೆಸಲಾಗುತ್ತಿದೆ. ಇದರಿಂದಾಗಿ ಉದ್ದಿಮೆದಾರರು ಇಲಾಖೆಯಿಂದ ಇಲಾಖೆಗೆ ಅಲೆಯುವುದು ತಪ್ಪಿದಂತಾಗುತ್ತದೆ.

ಸ್ಥದಲ್ಲಿಯೇ ಸಮಸ್ಯೆಗೆ ಎಲ್ಲ ಪರಿಹಾರ ಒದಗಲಿದ್ದು, ತ್ವರಿತ ಮತ್ತು ಸುಲಭವಾಗಿ ಉದ್ಯಮವನ್ನು ನಡೆಸಲು ಅನುಕೂಲವಾಗಲಿದೆ. ಅದಾಲತ್‍ನಲ್ಲಿ ಕಾನೂನು ಸರಳೀಕರಣ ಮಾಡಲಾಗುವುದು, ಅಕ್ರಮ ಮಾಡಿದರೆ ದಂಡದ ಐದು ಪಟ್ಟು ವಸೂಲಿ ಹಾಗೂ ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ವಿನೂತನ ಯೋಜನೆಯೇ ಗಣಿ ಅದಾಲತ್ ಆಗಿದೆ ಎಂದು ತಿಳಿಸಿದರು.

ಸಿಬ್ಬಂದಿಗೆ ಸಮವಸ್ತ್ರ: ಗೃಹ ಮತ್ತು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಮಾದರಿಯಲ್ಲೇ ಇನ್ನುಮುಂದೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗಳಿಗೂ ಕಡ್ಡಾಯವಾಗಿ ಸಮವಸ್ತ್ರ(ಯೂನಿಫಾರಂ) ಜಾರಿಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಶೀಘ್ರದಲ್ಲೇ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರವನ್ನು ನೀಡಲಾಗುವುದು. ಗಣಿ ಅಧಿಕಾರಿಗಳಿಗೆ ಅವರ ಸ್ಥಾನಮಾನಕ್ಕೆ ತಕ್ಕಂತೆ ಸ್ಟಾರ್ ನೀಡಲಾಗುತ್ತದೆ ಎಂದು ಹೇಳಿದರು.

ಯಾವುದೆ ಸ್ಥಳದಲ್ಲಾದರೂ ದಿಢೀರನೆ ದಾಳಿ ನಡೆಸುವಾಗ ಸಿಬ್ಬಂದಿಗಳನ್ನು ಕೆಲವರು ಗುರುತಿಸುವುದಿಲ್ಲ. ಸಿಬ್ಬಂದಿಗಳಿಗೆ ಸಮವಸ್ತ್ರ ನೀಡಿದರೆ ಗುರುತಿಸಲು ಸುಲಭವಾಗುತ್ತದೆ. ಸದ್ಯದಲ್ಲೇ ಸಿಬ್ಬಂದಿಗಳಿಗೆ ಸಮವಸ್ತ್ರಗಳನ್ನು ಕೊಡಲಾಗುವುದು ಎಂದ ಅವರು, ಇದರ ಜೊತೆಗೆ ನಿವೃತ್ತ ಸೇನಾ ಯೋಧರನ್ನು ಇಲಾಖೆಯಲ್ಲಿ ಭದ್ರತಾ ಅಧಿಕಾರಿ(ಸೆಕ್ಯೂರಿಟಿ) ನಿಯೋಜನೆ ಮಾಡಿಕೊಳ್ಳುವ ಚಿಂತನೆಯಿದೆ. ಹೊರಗುತ್ತಿಗೆ ಆಧಾರದ ಮೇಲೆ ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು ಸೇರಿದಂತೆ ಪ್ರತಿ ಜಿಲ್ಲೆಗೆ ಐವರು ಸಿಬ್ಬಂದಿ ನೇಮಕ ಮಾಡುವುದರ ಜೊತೆಗೆ ವಾಹನಗಳಿಗೂ ಜಿಪಿಎಸ್ ಅಳವಡಿಕೆ ಮಾಡಲಾಗುವುದು ಎಂದರು.

‘ಸಿಡಿ ಪ್ರಕರಣದಿಂದ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗುವ ವಿಶ್ವಾಸವಿದೆ. ನ್ಯಾಯದೇವತೆಯ ತಕ್ಕಡಿ ಎಲ್ಲರಿಗೂ ಒಂದೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ವತಃ ಅವರೇ ಹೇಳುತ್ತಿದ್ದಾರೆ. ಹೀಗಾಗಿ ಅವರು ಆರೋಪದಿಂದ ಮುಕ್ತರಾಗಲಿದ್ದಾರೆ. ಪ್ರಕರಣ ತನಿಖೆಯಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ'

-ಮುರುಗೇಶ್ ನಿರಾಣಿ ಗಣಿ ಮತ್ತು ಭೂ ವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News