ಆನೇಕಲ್ : ಕರಡಿ ದಾಳಿ; ಮೂವರಿಗೆ ಗಾಯ
Update: 2021-03-30 09:29 IST
ಆನೇಕಲ್ : ಕರಡಿಯೊಂದು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ಘಟನೆ ಆನೇಕಲ್ ತಾಲೂಕಿನ ಶೆಟ್ಟಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ.
ಶೆಟ್ಟಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ, ರಾಮಕ್ಕ, ಮಂಜು, ವೆಂಕಟಸ್ವಾಮಿ ಎಂಬವರ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಾಳುಗಳು ಆನೇಕಲ್ ಪಟ್ಟಣದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಬನ್ನೇರುಘಟ್ಟ ಪ್ರಾಣಿಗಳ ಕೇಂದ್ರದಿಂದ ಕರಡಿಯೊಂದು ತಪ್ಪಿಸಿಕೊಂಡಿತ್ತು. ಅದೇ ಕರಡಿಯೇ ಎಂಬ ಅನುಮಾನ ಬನ್ನೇರುಘಟ್ಟ ವೈದ್ಯರಲ್ಲಿ ಮೂಡಿದೆ. ದಾಳಿಗೂ ಮುನ್ನ ಚಂದಾಪುರ ಕೆಇಬಿ ಭಾಗದಲ್ಲಿ ಪತ್ತೆಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.