ನಳಿನ್ ಕಟೀಲ್ ಅವರೇ, ವಂಚಕ ಪ್ರಸಾದ್ ಅತ್ತಾವರನ ಲೂಟಿಯಲ್ಲಿ ನಿಮ್ಮದೆಷ್ಟು ಪಾಲು?: ಕಾಂಗ್ರೆಸ್
ಬೆಂಗಳೂರು, ಮಾ.30: ಬಿಜೆಪಿಗರು "ಜೈ ಶ್ರೀರಾಮ್" ಎಂದರೆ ಸ್ವತಃ ರಾಮನೇ ಅಸಹ್ಯಪಟ್ಟುಕೊಳ್ಳುತ್ತಾನೆ. ರಾಮನ ಹೆಸರಲ್ಲಿ ರಾಜ್ಯ ಬಿಜೆಪಿ ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ. ಪ್ರಸಾದ್ ಅತ್ತಾವರ ಎನ್ನುವ ಬಿಜೆಪಿ ಮುಖಂಡನ ವಂಚನೆ ಜಾಲ ಬಯಲಾಗಿದೆ. ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ 17 ಲಕ್ಷ ರೂ.ವಂಚಿಸಿದ್ದಾನೆ. ರಾಮ ಬಿಜೆಪಿಯನ್ನು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಮನೆಂದರೆ ಹಿಂದೂಗಳಿಗೆ ಧ್ಯಾನ, ಭಕ್ತಿ, ಶ್ರದ್ಧೆ. ಸಮಸ್ತ ಹಿಂದುಗಳ ಭಾವನೆ ಗೌರವಿಸಿ ರಾಜ್ಯ ಬಿಜೆಪಿ ಇನ್ನುಮುಂದೆ ರಾಮನ ಹೆಸರು ಹೇಳುವುದನ್ನ ನಿಲ್ಲಿಸಬೇಕು. ರಾಜಕೀಯ, ಕೊಲೆ, ಸುಲಿಗೆ, ಹಿಂಸೆ, ವಂಚನೆ ಮುಂತಾದ ಅಧರ್ಮಗಳು ತನ್ನ ಹೆಸರಲ್ಲಿ ಮಾಡುವುದನ್ನ ರಾಮ ಸಹಿಸುವುದಿಲ್ಲ, ರಾಮನ ನಿಜ ಭಕ್ತರೂ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
ಭ್ರಷ್ಟಾಚಾರದ ಕೂಪವಾಗಿರುವ ರಾಜ್ಯ ಬಿಜೆಪಿ ಸರಕಾರದಲ್ಲಿ ರಾಮನ ಹೆಸರನ್ನು ವಂಚನೆಗೆ, ಕುಕೃತ್ಯಗಳಿಗೆ ಪರವಾನಿಗೆಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರೇ, ವಂಚಕ ಪ್ರಸಾದ್ ಅತ್ತಾವರನ ಲೂಟಿಯಲ್ಲಿ ನಿಮ್ಮದೆಷ್ಟು ಪಾಲು? ವರ್ಗಾವಣೆ, ನೇಮಕಾತಿ, ಅನುದಾನ ಬಿಡುಗಡೆ, ನೆರೆ ಪರಿಹಾರ ವಿತರಣೆ ಎಲ್ಲದರಲ್ಲೂ ಬಿಜೆಪಿ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.