ಕಾರುಗಳ ನಡುವೆ ಅಪಘಾತ: ಕೃಷ್ಣ ಜಲ ಭಾಗ್ಯ ಮಂಡಳಿಯ ಅಧಿಕಾರಿ ಸೇರಿ ನಾಲ್ವರು ಮೃತ್ಯು
Update: 2021-04-01 15:05 GMT
ಬಳ್ಳಾರಿ, ಎ.1: ಇಲ್ಲಿನ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯ ಹಾರೋವನಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಕೃಷ್ಣ ಜಲ ಭಾಗ್ಯ ಮಂಡಳಿಯ ಅಧಿಕಾರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಗುರುವಾರ ಈ ಅಪಘಾತ ನಡೆದಿದ್ದು, ಕೃಷ್ಣ ಜಲ ಭಾಗ್ಯ ಮಂಡಳಿಯ ಅಧಿಕಾರಿ ಕೋದಂಡ ರಾಮಸ್ವಾಮಿ(55), ಜಿತೇಂದ್ರಪ್ಪ ಪನ್ವರ್(50) ಹಾಗೂ ಖಾಸಗಿ ಕಾರಿನಲ್ಲಿದ್ದ ಕಾವ್ಯ(35) ಮತ್ತು ಶರಣ ಬಸವ ಎಂಬುವರು ಮೃತರು ಎಂದು ಗುರುತಿಸಲಾಗಿದೆ.
ಹಾರೋವನಹಳ್ಳಿಯತ್ತ ಬರುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಇನ್ನೊಂದು ಸರಕಾರಿ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದು, ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ.
ಸದ್ಯ ಗಾಯಾಳುಗಳನ್ನು ಹೊಸಪೇಟೆ ಸರಕಾರಿ ಆಸ್ಪತ್ರೆ ಮತ್ತು ಬಳ್ಳಾರಿ ವಿಮ್ಸ್ ಗೆ ಚಿಕಿತ್ಸೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.