ದನ ಸಾಗಾಟ ಆರೋಪದಲ್ಲಿ ಹಲ್ಲೆ ಪ್ರಕರಣ: ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಎಸ್ಸೆಸ್ಸೆಫ್ ಆಗ್ರಹ

Update: 2021-04-01 16:58 GMT

ಬೆಳ್ತಂಗಡಿ, ಎ.1: ಜಾನುವಾರು ಸಾಗಾಟದ ನೆಪವೊಡ್ಡಿ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ತಂಡವೊಂದು ಕಾನೂನು ಕೈಗೆತ್ತಿಕೊಂಡು ಅಮಾಯಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇತ್ತೀಚೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಗೋವಿನ ಹೆಸರಿನಲ್ಲಿ, ಕಪೋಲಕಲ್ಪಿತ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಯುವಕರನ್ನು ಗುರಿಯಾಗಿಸಿ ನಡೆಸುವ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ. ಇಂತಹ ಘಟನೆಗಳನ್ನು ಪೊಲೀಸ್ ಇಲಾಖೆ ಮಟ್ಟಹಾಕಬೇಕು ಎಂದು ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ನಾಯಕರ ಬಳಗ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಬೆಳ್ತಂಗಡಿ ಠಾಣೆಯಲ್ಲಿ ಗುರುವಾರ ಸಂಜೆ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಅವರನ್ನು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರನ್ನು ಒಳಗೊಂಡ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ತಾಲೂಕಿನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ‌ ಹಲವು ಕಡೆ ಹಿಂಸೆ ನೀಡುತ್ತಿರುವುದು, ಸುಳ್ಳು ಕಥೆ ಸೃಷ್ಟಿಸಿ ಅಮಾಯಕರನ್ನು ವ್ಯವಸ್ಥಿತವಾಗಿ ಜೈಲಿಗೆ ತಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದರಿಂದಾಗಿ ಸಾರ್ವಜನಿಕರು ಭಯದಿಂದ ಇರುವಂತಾಗಿದೆ. ಅದರ ಮುಂದುವರಿದ ಭಾಗವೆಂಬಂತೆ ಮೇಲಂತಬೆಟ್ಟು ಘಟನೆಯೂ ನಡೆದಿದೆ. ಪವಿತ್ರ ರಂಝಾನ್ ಸಮೀಪಿಸುತ್ತಿದ್ದಂತೆ ಕೋಮು ಸಂಘರ್ಷ ಸೃಷ್ಟಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಆದುದರಿಂದ ನಿನ್ನೆ ನಡೆದ ಅಮಾಯಕರ ಮೇಲಿನ ಹಲ್ಲೆ ಪ್ರಕರಣದ ದುಷ್ಕರ್ಮಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿತು.

ಮೇಲಂತಬೆಟ್ಟು ಘಟನೆಯ ಆರೋಪಿಗಳ ‌ಮೇಲೆ ಮೃದು ಧೋರಣೆ ಸರಿಯಾದ ಕ್ರಮ ಅಲ್ಲ. ಅಲ್ಲದೆ ಬೆಳ್ತಂಗಡಿ ತಾಲೂಕಿನಾದ್ಯಂತ ಮಿತಿ ಮೀರುತ್ತಿರುವ  ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಮುಂದೆ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯು ಸಂಘಟಿತ ಹೋರಾಟವನ್ನು ನಡೆಸಲಿದೆ ಎಂದು ನಿಯೋಗ ಎಚ್ಚರಿಸಿತು.

ನಿಯೋಗದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯ, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ರಾಜ್ಯ ಸದಸ್ಯ, ಜಿಲ್ಲಾ ಕೋಶಾಧಿಕಾರಿ ಎಂ.ಶರೀಫ್‌ ಬೆರ್ಕಳ, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಮಾಚಾರ್, ಮುಸ್ತಫಾ ಉರುವಾಲುಪದವು, ಜಿಲ್ಲಾ ಸದಸ್ಯ ಶರೀಫ್ ನಾವೂರು, ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಹಾರಿಸ್ ಕುಕ್ಕುಡಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ತೌಫಿಕ್ ವೇಣೂರು, ಕೋಶಾಧಿಕಾರಿ ಝಮೀರ್ ಸಅದಿ ಲಾಯಿಲ, ಕಾರ್ಯದರ್ಶಿ ಯೂಸುಫ್ ಮದನಿ ಕೊಯ್ಯೂರು, ಡಿವಿಷನ್ ನಾಯಕ ಹಕೀಂ ಕಕ್ಕಿಂಜೆ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News