8 ತಿಂಗಳಿಂದ ಸಂಬಳ ನೀಡಿಲ್ಲ, ಪಡೆದ ಸಾಲವನ್ನೂ ಪಿಡಿಒ ಮರಳಿಸಿಲ್ಲ: ಪೌರ ಕಾರ್ಮಿಕ ಆರೋಪ

Update: 2021-04-02 18:20 GMT

ಚಾಮರಾಜನಗರ, ಎ.2: ಜಿಲ್ಲೆಯ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ ಏಕೈಕ ಪೌರಕಾರ್ಮಿಕನ ಬಳಿ ಸಾಲ ಪಡೆದು ಮರಳಿಸಿಲ್ಲ. ಅಷ್ಟು ಮಾತ್ರವಲ್ಲದೆ, ಆತನಿಗೆ ಎಂಟು ತಿಂಗಳಿಂದ ಸಂಬಳವನ್ನೂ ನೀಡದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಸತಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಕುಮಾರ್ ಪಂಚಾಯತ್ ಅನುಮೋದಿತ ಪೌರಕಾರ್ಮಿಕ ಪಿ.ಮಹೇಶ್ ಬಳಿ 20 ಸಾವಿರ ರೂ. ಸಾಲ ಪಡೆದು ಮರಳಿಸದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ಸ್ವಚ್ಛತಾ ಕೆಲಸಕ್ಕಾಗಿ ಹೆಚ್ಚುವರಿಯಾಗಿ ನಿಯೋಜಿಸಿದ್ದ ಕೊಂಡಿದ್ದ ನಾಲ್ಕು ಪೌರಕಾರ್ಮಿಕರಿಗೆ ದಿನಗೂಲಿ ಪಾವತಿಸಲು 20 ಸಾವಿರ ರೂ. ಪೌರಕಾರ್ಮಿಕನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್‌ಕುಮಾರ್ ಸಾಲ ಪಡೆದುಕೊಂಡಿದ್ದಾರೆ. ಆದರೆ, ಈವರೆಗೂ ಮರಳಿಸಿಲ್ಲ. ಇದೀಗ ಸಾಲಕೊಟ್ಟ ಪೌರಕಾರ್ಮಿಕನ ಆರೋಗ್ಯ ಹದಗೆಟ್ಟು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

‘ಕೊಟ್ಟ ಹಣವನ್ನಾದರೂ ಕೊಡಿ ಅಥವಾ ಸಂಬಳವನ್ನಾದರೂ ನೀಡಿ’ ಎಂದು ಗೋಗರಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. 13 ದಿನದ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಪೌರಕಾರ್ಮಿಕ ಮಹೇಶ್ ಅವರಿಗೆ ಪರಿಚಯಸ್ಥ ಪೌರಕಾರ್ಮಿಕರು ಉಚಿತವಾಗಿ ಈ ಹಿಂದೆ ಹರಿಣಿ ಶಸ್ತ್ರಚಿಕಿತ್ಸೆ ಮಾಡಿಸುವಲ್ಲಿ ನೆರವಾಗಿದ್ದಾರೆ. ಆದರೆ ಈಗ ಇತರ ಖರ್ಚುಗಳಿಗೆ ಹಣವಿಲ್ಲದೇ ಪರಿತಪಿಸುತ್ತಿದ್ದಾರೆ.

ಏಕೈಕ ಪೌರಕಾರ್ಮಿಕ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್‌ಗೆ ತಮ್ಮಡಗೇರಿ, ಪುದೂರು, ಆನೆಹೊಲ, ಸಾಲೂರು ಮಠದ ರಸ್ತೆ, ಜನತಾ ಕಾಲನಿ ಸೇರಿದಂತೆ 18 ಹಾಡಿಗಳು ಈ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತವೆ. ಈ ಎಲ್ಲ ಗ್ರಾಮಗಳ ಸ್ವಚ್ಛತೆ ಕೆಲಸ ಕಾರ್ಯಗಳಿಗೆ ಒಬ್ಬರೇ ಒಬ್ಬ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಏಳು ನೂರು ಜನರು ಇರುವ ಪ್ರದೇಶಕ್ಕೆ ಒಬ್ಬರು ಪೌರಕಾರ್ಮಿಕರು ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮ ಇದೆ. ಆದರೆ, ಈ ನಿಯಮ ಕೇವಲ ದಾಖಲೆ ಪುಸ್ತಕದಲ್ಲಿ ಇದೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪಿಡಿಒ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಟು ತಿಂಗಳಿಂದ ಸಂಬಳ ನೀಡಿಲ್ಲ. ಪಡೆದ ಸಾಲವನ್ನೂ ಈವರೆಗೂ ಮರಳಿಸಿಲ್ಲ. ಆರು ತಿಂಗಳಲ್ಲಿ ಒಮ್ಮೆಯೂ ಆರೋಗ್ಯ ತಪಾಸಣೆ ನಡೆಸಿಲ್ಲ. ಈಗ ಶಸ್ತ್ರಚಿಕಿತ್ಸೆ ಆಗಿ ಎಂಟು ದಿನ ಕಳೆದಿದೆ. ರಜೆ ಪಡೆದು ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ಹೇಳಿ ಬಂದಿದ್ದರೂ ಪಿಡಿಒ ಅವರು ಕನಿಷ್ಠ ಆರೋಗ್ಯ ವಿಚಾರಿಸುವ ಸೌಜನ್ಯವನ್ನೂ ತೋರಿಲ್ಲ. ಕೊಟ್ಟ ಹಣವನ್ನು ವಾಪಸ್ ಮಾಡದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸದ್ಯ ಆರೋಗ್ಯ ಖರ್ಚುಗಳಿಗೆ ಹಣದ ಕೊರತೆಯಾಗಿ ತೊಂದರೆಗೆ ಸಿಲುಕಿದ್ದೇನೆ.
-ಪಿ.ಮಹೇಶ್, ಪೌರಕಾರ್ಮಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News