ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಸಲೀಮ್ ಅಹ್ಮದ್ ವಾಗ್ದಾಳಿ

Update: 2021-04-05 12:59 GMT

ಬೆಂಗಳೂರು, ಎ.5: ನಾಲಿಗೆ ಹರಿಬಿಡುವುದರಲ್ಲಿ, ಸುಳ್ಳು ಹೇಳುವುದರಲ್ಲಿ ರಾಜ್ಯದಲ್ಲೆ ಕುಖ್ಯಾತಿ ಪಡೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ವಿಷಕಾರಿ’ ಎಂದು ಸಂಭೋದಿಸಿರುವುದನ್ನು ಕಾಂಗ್ರೆಸ್ ಪಕ್ಷ ಒಕ್ಕೊರಲಿನಿಂದ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ತಿಳಿಸಿದ್ದಾರೆ.

ಸತತ 9 ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಳಿನ್ ಕುಮಾರ್ ಕಟೀಲ್ ಬಾಯಿಗೆ ಬಂದಂತೆ ಮಾತನಾಡುವ ಮುನ್ನ, ರಾಷ್ಟ್ರಕ್ಕೆ, ರಾಜ್ಯಕ್ಕೆ ಹಾಗೂ ಕಲಬುರಗಿ ಜಿಲ್ಲೆಗೆ ಖರ್ಗೆಯವರ ಕೊಡುಗೆ ಏನೆಂಬುದನ್ನು ಅರಿತುಕೊಳ್ಳಲಿ, ಖರ್ಗೆಯವರು ರಾಜ್ಯ ಸರಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಅನನ್ಯ ಎಂದು ಅವರು ತಿಳಿಸಿದ್ದಾರೆ.

ಹೈ-ಕ ಭಾಗಕ್ಕೆ ಐತಿಹಾಸಿಕ 371(ಜೆ) ವಿಶೇಷ ಮೀಸಲಾತಿ ಒದಗಲು ಪ್ರಮುಖ ಕಾರಣ ಖರ್ಗೆಯವರ ನಿರಂತರ ಹೋರಾಟ. ರೈಲ್ವೆ ಡಿವಿಷನ್, ಇಎಸ್‍ಐಸಿ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ, ಎನ್‍ಐಎಂಝೆಡ್, ಕಲಬುರಗಿ ವಿಮಾನ ನಿಲ್ದಾಣ ಹಾಗೂ ಜವಳಿ ಪಾರ್ಕ್ ಮುಂತಾದ ಸಹಸ್ರಾರು ಯೋಜನೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ತಂದದ್ದು ಖರ್ಗೆಯವರು ಎಂದು ಸಲೀಮ್ ಅಹ್ಮದ್ ನೆನಪಿಸಿದ್ದಾರೆ.

ಯುಪಿಎ ಸರಕಾರದಲ್ಲಿ ರೈಲ್ವೆ ಹಾಗೂ ಕಾರ್ಮಿಕ ಸಚಿವರಾಗಿದ್ದ ವೇಳೆ ಈ ಇಲಾಖೆಗಳಲ್ಲಿ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದರು. ಅವರ ಅವಧಿಯಲ್ಲೆ ಇಎಸ್‍ಐಸಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಯಿತು. ರಾಜ್ಯದ ರಸ್ತೆ, ಕೃಷಿ ಹಾಗೂ ನೀರಾವರಿ ಯೋಜನೆಗಳಿಗೆ ಅನುದಾನ ತರುವಲ್ಲಿಯೂ ಖರ್ಗೆಯವರ ಪರಿಶ್ರಮ ಅಪರಿಮಿತವಾದದ್ದು ಎಂದು ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ತಮ್ಮ ಮಾತಿನ ವೈಖರಿಯ ಮೂಲಕ ಕೇಂದ್ರದ ವೈಫಲ್ಯಗಳನ್ನು ಜನರೆದರು ತೆರೆದಿಡುತ್ತಿದ್ದ ಖರ್ಗೆಯವರನ್ನು ಸೋಲಿಸಲು ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿಯ ಎಲ್ಲ ನಾಯಕರು ಕುತಂತ್ರ ಮಾಡಿ, ಅವರನ್ನು ಸೋಲಿಸಿದರು. ಆದರೆ, ಅವರ ಸೋಲಿನಿಂದ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಮಾತ್ರ ಕಲಬುರಗಿ ಜಿಲ್ಲೆ ಹಾಗೂ ನಮ್ಮ ರಾಜ್ಯ. ಅವರು ಸಂಸದರಾದ ನಂತರ ಖರ್ಗೆಯವರು ಅವಧಿಯಲ್ಲಿ ಮಂಜೂರಾಗಿದ್ದ ಒಂದೊಂದೆ ಯೋಜನೆಗಳು ಜಿಲ್ಲೆಯ ಕೈ ತಪ್ಪುತ್ತಿವೆ. ಈಗಾಗಲೇ ಪ್ರತ್ಯೇಕ ರೈಲ್ವೆ ವಿಭಾಗ, ಎಐಐಎಂಎಸ್, ಎನ್‍ಐಎಂಝೆಡ್, ಜವಳಿ ಪಾರ್ಕ್ ಯೋಜನೆಗೆ ಬಿಜೆಪಿ ಸರಕಾರ ಎಳ್ಳು ನೀರು ಬಿಟ್ಟಿದೆ ಎಂದು ಅವರು ಕಿಡಿಗಾರಿದ್ದಾರೆ.

ಖರ್ಗೆಯವರು ವಿಷಕಾರಿಯಾದರೆ, ಬಿಜೆಪಿಯವರೇನು ಮಕರಂದ ಸೂಸುವವರೇ? ಬಿಜೆಪಿಯವರಿಂದ ಕಲಬುರಗಿ ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಸಿಕ್ಕಿಲ್ಲ. ಕೇವಲ ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ್ದು ಬಿಟ್ಟರೆ, ಈ ಭಾಗಕ್ಕೆ ಬಿಜೆಪಿ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೆ ಹೆಚ್ಚು. ಆದುದರಿಂದ, ನಳಿನ್ ಕುಮಾರ್ ಕಟೀಲ್ ಅವರು ಖರ್ಗೆಯವರ ಕುರಿತು ಬಾಯಿಗೆ ಬಂದಂತೆ ಮಾತನಾಡುವ ಮುನ್ನ ಖರ್ಗೆಯವರ ಸಾಧನೆಗಳನ್ನೊಮ್ಮೆ ಅರಿತುಕೊಳ್ಳಲಿ ಎಂದು ಸಲೀಮ್ ಅಹ್ಮದ್ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News