ದುಬಾರೆ ಮೀಸಲು ಅರಣ್ಯದಲ್ಲಿ ಬೆಂಕಿ: ನೂರಾರು ವನ್ಯಜೀವಿಗಳು ಸುಟ್ಟು ಕರಕಲು
Update: 2021-04-05 22:27 IST
ಮಡಿಕೇರಿ, ಎ.5: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಗೇಟ್ ಹಾಡಿ, ದೊಡ್ಡ ಹಡ್ಲು ಭಾಗದಲ್ಲಿ ದುಬಾರೆ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ವನ್ಯಜೀವಿಗಳು ಸುಟ್ಟು ಕರಕಲಾಗಿವೆ.
ಸುಮಾರು ಹನ್ನೆರಡು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಐವತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಹಾಡಿಯ ನಿವಾಸಿಗಳ ಸಹಕಾರದಿಂದ ಅಗ್ನಿ ಜ್ವಾಲೆಯನ್ನು ನಿಯಂತ್ರಿಸಲಾಗಿದೆ.
ಬೆಂಕಿ ವ್ಯಾಪಕವಾಗಿ ಹಬ್ಬುವ ಭೀತಿ ಎದುರಾಗಿತ್ತಾದರೂ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಆದರೆ ನೂರಾರು ವನ್ಯಜೀವಿಗಳು ಅಗ್ನಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.