ನಕಲು ಮಾಡಲು ಅವಕಾಶ ಸಿಗದಿದ್ದಕ್ಕೆ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳು; ಪೊಲೀಸ್ ಠಾಣೆ ಎದುರು ಪ್ರತಿಭಟನೆ !
ಶಿವಮೊಗ್ಗ, ಎ.6: ನಗರದ ಕಾಲೇಜುವೊಂದರಲ್ಲಿ ನರ್ಸಿಂಗ್ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಹಾಗೂ ದೊಡ್ಡ ಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ವಿದ್ಯಾರ್ಥಿಗಳೆಲ್ಲರೂ ಕೊಲ್ಕತ್ತಾ ಮೂಲದವರಾಗಿದ್ದು, ಮಧ್ಯವರ್ತಿಯೊಬ್ಬರಿಗೆ ಜಿಎನ್ಎಂ ಕೋರ್ಸ್ಗೆ ಲಕ್ಷಾಂತರ ಹಣ ನೀಡಿದ್ದಾರೆಂದು ತಿಳಿದುಬಂದಿದೆ.
ಹಾಲ್ ಟಿಕೆಟ್ ಸಿಗದ ಕಾರಣದಿಂದಾಗಿ ಸೋಮವಾರ ಪರೀಕ್ಷೆಗೆ ವಿಳಂಬವಾಗಿ ಹಾಜರಾಗಿದ್ದರು. ಎರಡನೇ ಪರೀಕ್ಷೆ ಮಂಗಳವಾರ ಬರೆಯಬೇಕಿತ್ತು. ಆದರೆ, ಪರೀಕ್ಷೆ ಬರೆಯುವುದನ್ನು ಬಿಟ್ಟು 38 ವಿದ್ಯಾರ್ಥಿಗಳು ಕ್ಯಾತೆ ತೆಗೆದಿದ್ದಲ್ಲದೇ, ಮಧ್ಯವರ್ತಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಪರೀಕ್ಷೆಯಲ್ಲಿ ಸ್ವಲ್ಪವೂ ಪುಸ್ತಕ ನೋಡಲು ಅವಕಾಶ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 'ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಪರೀಕ್ಷೆ ಬರೆಯಲು ಬಂದಿದ್ದು, ಇಲ್ಲಿಯ ಸ್ಥಿತಿಯೇ ಬೇರೆಯ ರೀತಿಯಲ್ಲಿದೆ. ಇದಕ್ಕೆ ಮಧ್ಯವರ್ತಿಯೇ ನೇರ ಹೊಣೆ. ಹೀಗಾಗಿ, ನಮ್ಮ ಹಣ ವಾಪಸ್ ನೀಡಬೇಕು’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕಾಲೇಜು ಎದುರುಗಡೆ ಪ್ರತಿಭಟನೆ ನಡೆಸಿದ ಬಳಿಕ ಅಲ್ಲಿಂದ ಅಭ್ಯರ್ಥಿಗಳು ದೊಡ್ಡ ಪೇಟೆ ಪೊಲೀಸ್ ಠಾಣೆಯ ಮುಂದೆ ಸಂಜೆ ಪ್ರತಿಭಟನೆ ನಡೆಸಿದರು.