ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

Update: 2021-04-06 17:27 GMT

ಬೆಂಗಳೂರು, ಎ.6: ಎರಡು ಅವತಾರಗಳನ್ನು ಪೂರ್ಣಗೊಳಿಸಿ ಮೂರನೇ ಅವತಾರದಲ್ಲಿರುವ ಭಾರತೀಯ ಜನತಾ ಪಕ್ಷವು ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಸಂಸದರು, ಗರಿಷ್ಠ ಕಾರ್ಯಕರ್ತರು, ಅತಿ ಹೆಚ್ಚು ಶಾಸಕರು, ಅತಿ ಹೆಚ್ಚು ಸಂಖ್ಯೆಯ ಎಸ್ಸಿ, ಎಸ್ಟಿ ಹಾಗೂ ಮಹಿಳಾ ಶಾಸಕರನ್ನು ಹೊಂದಿದ ಪಕ್ಷವಾಗಿ ಬಿಜೆಪಿ ಬೆಳೆದುನಿಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಮಂಗಳವಾರ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬಿಜೆಪಿ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಪ್ರಧಾನ ಭಾಷಣ ಮಾಡಿದರು.

1951ರಲ್ಲಿ ಜನಸಂಘ ಆರಂಭಗೊಂಡಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನೆಹರೂ ಅವರ ನಿರ್ಧಾರವನ್ನು ವಿರೋಧಿಸಿ ರಾಷ್ಟ್ರೀಯ ಚಿಂತನೆಯ ಪಕ್ಷವನ್ನು ಶ್ಯಾಮಪ್ರಸಾದ ಮುಖರ್ಜಿ ಅವರು ಆರಂಭಿಸಿದರು. ಪಕ್ಷವು ಕಾಶ್ಮೀರದ ಜೈಲಿನಲ್ಲೇ ಅವರ ಸಾವನ್ನು ಕಾಣುವಂತಾಯಿತು. ಬಳಿಕ ಪಕ್ಷದ ಹಿರಿಯ ಮುಖಂಡರಾದ ದೀನದಯಾಳ ಉಪಾಧ್ಯಾಯರ ಕಗ್ಗೊಲೆ ನಡೆಯಿತು. ಹೀಗೆ ನಾಯಕರ ಅನಿರೀಕ್ಷಿತ ಸಾವಿನಿಂದ ಕಂಗೆಡದೆ ಪಕ್ಷ ಮುನ್ನಡೆಯಿತು ಎಂದು ಅವರು ವಿವರಿಸಿದರು.

ದೇಶದಲ್ಲಿನ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಮತ್ತು ಇಂದಿರಾ ಗಾಂಧಿ ಅವರ ನಿರ್ಧಾರಗಳನ್ನು ಆಕ್ಷೇಪಿಸಿ ಜನತಾ ಪಕ್ಷ ಸ್ಥಾಪನೆಯಾದಾಗ ಅದರಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಹೊಸ ಪಕ್ಷದಲ್ಲಿ ಸೇರಿದರು. 1980ರಲ್ಲಿ ಮುಂಬೈ ಮಹಾಧಿವೇಶನದಲ್ಲಿ ಬಿಜೆಪಿ ಸ್ಥಾಪನೆಗೊಂಡಿತು. ಆರಂಭಿಕ ದಿನಗಳಲ್ಲಿ ಕನಿಷ್ಠ ಸ್ಥಾನ ಪಡೆದರೂ ಈಗ ಪಕ್ಷವು ಅತಿದೊಡ್ಡದಾಗಿ ಬೆಳೆದು ನಿಂತಿದೆ ಸಿ.ಟಿ.ರವಿ ಹೇಳಿದರು.

370ನೇ ವಿಧಿ ರದ್ದು ಮಾಡುವ ಮೂಲಕ ಪಕ್ಷವು ಕಾಶ್ಮೀರಕ್ಕೆ ನ್ಯಾಯ ಸಿಗುವಂತೆ ಮಾಡಿದೆ. ಸಿಎಎ ಜಾರಿ ಮೂಲಕ ನಿರಾಶ್ರಿತರಿಗೆ ನ್ಯಾಯ ನೀಡಿದೆ. ಶ್ರೀರಾಮ ಮಂದಿರ ನಿರ್ಮಾಣ ಕುರಿತ ನಿರ್ಧಾರದ ಮೂಲಕ ದೇಶದ ಸಾಂಸ್ಕೃತಿಕ ಅಸ್ಮಿತೆಗೆ ಗೌರವ ನೀಡುವ ಕೆಲಸ ಮಾಡಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ, ಕೆ.ಎಸ್.ನವೀನ್, ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಕಾಸಲೆ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ.ನಾರಾಯಣ್, ರಾಜ್ಯ ಮತ್ತು ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

ಅಧಿಕಾರವೇ ಅಂತಿಮ ಗುರಿಯಲ್ಲ

ದೇಶದ ಕಟ್ಟ ಕಡೆಯ ಮನುಷ್ಯನಿಗೆ ನೆರವು ನೀಡುವ ಕಾರ್ಯ ಮಾಡಬೇಕೆಂಬ ದೀನ್‍ದಯಾಳ ಉಪಾಧ್ಯಾಯರ ಕನಸನ್ನು ನನಸು ಮಾಡುವತ್ತ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ. ಕೃಷಿ ಸಮ್ಮಾನ್, ಜನಧನ್, ಉಜ್ವಲಾ ಹಾಗೂ ಆಯುಷ್ಮಾನ್ ಮತ್ತಿತರ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದಾನಿ, ಅಂಬಾನಿ ಕೇಂದ್ರಿತ ಯೋಜನೆಗಳು ನಮ್ಮದಲ್ಲ. ರಾಜಕೀಯವು ಬದಲಾವಣೆಗೆ ಪೂರಕ ಎಂಬ ಚಿಂತನೆ ನಮ್ಮದು. ಅಧಿಕಾರವೇ ಅಂತಿಮ ಗುರಿಯಲ್ಲ. ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯುವ ಗುರಿ ನಮ್ಮದು.

-ಸಿ.ಟಿ.ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News