ಬೇಡಿಕೆಗಳು ಈಡೇರುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-07 16:18 GMT

ಬೆಂಗಳೂರು, ಎ.7: ಆರವೇ ವೇತನ ಆಯೋಗದ ಶಿಫಾರಸು ಜಾರಿ ಸಂಬಂಧ ರಾಜ್ಯ ಸರಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ. ಇಲ್ಲವಾದರೆ, ಗುರುವಾರವೂ ಮುಷ್ಕರದ ಬಿಸಿ ಎದುರಿಸಲಿ ಎಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಬುಧವಾರ ಗಾಂಧಿನಗರದ ತಮ್ಮ ಕಚೇರಿಯಲ್ಲಿ ಮುಷ್ಕರ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಇಂದಿನಿಂದ ಆರಂಭವಾಗಿದ್ದು, ನಾಳೆಯೂ ಮುಂದುವರಿಯಲಿದೆ ಎಂದು ಪ್ರಕಟಿಸಿದರು.

ಸಾರಿಗೆ ನೌಕರರ ಬೇಡಿಕೆ ಈಡೆರಿಸಲು 700 ಕೋಟಿ ರೂಪಾಯಿ ಬೇಕಾಗುತ್ತದೆ, 700 ಕೋಟಿ ನಷ್ಟವಾಗುತ್ತದೆ ಎಂದು ಮಾತುಕತೆಗೆ ಹೋದಾಗ ಸರಕಾರ ಹೇಳಿದೆ. ಒಂದೂವರೆ ಲಕ್ಷ ಬಡ ಕಾರ್ಮಿಕರಿಗೆ ಇಷ್ಟು ಹಣ ನೀಡಿದರೆ ಅದು ನಷ್ಟ ಹೇಗೆ ಆಗುತ್ತದೆ. ನಿಮಗೆ ಬೇಕಾದ ಮಠಗಳಿಗೆ, ಜಾತಿ ಧರ್ಮಗಳಿಗೆ, ನಿಗಮ ಮಂಡಳಿ, ಅಭಿವೃದ್ಧಿ ಮಂಡಳಿಗೆ 500 ಕೋಟಿಗಳಿಗೂ ಹೆಚ್ಚು ಹಣಗಳನ್ನು ಬಿಡುಗಡೆ ಮಾಡುತ್ತಿದ್ದೀರಿ ಅದು ನಿಮಗೆ ನಷ್ಟವೆನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಮುಂಜಾನೆಯಿಂದಲೇ ಸಾರಿಗೆ ಸತ್ಯಾಗ್ರಹ ಶುರುವಾಗಿದ್ದು, ನ್ಯಾಯಯುತ ಬೇಡಿಕೆಗಳು ಈಡೇರಿಸುವರೆಗೂ ಈ ಸತ್ಯಾಗ್ರಹ ಕೈಬಿಡುವುದಿಲ್ಲ. ಅಲ್ಲದೆ, ಯಾವುದೇ ರೀತಿಯ ಕೋವಿಡ್ ನೀತಿ ನಿಯಮ ಉಲ್ಲಂಘನೆ, ಅಹಿತಕರ ಘಟನೆ ನಡೆದಿಲ್ಲ. ಶಿಸ್ತಿನೊಂದಿಗೆ ಸತ್ಯಾಗ್ರಹ ಮುಂದುವರಿದಿದೆ ಎಂದರು.

ಇದರ ಜೊತೆಗೆ ಬರುವ ಎಪ್ರಿಲ್ 10 ರಂದು 4 ನಿಗಮಗಳಿಗೆ ಸಂಬಂಧಿಸಿದಂತೆ ವಿಭಾಗ ಸಭೆಯನ್ನು ಮಾಡಲಾಗುತ್ತೆ. ಬೆಳಗಾವಿಯಲ್ಲಿ ಮುಖ್ಯಸ್ಥರ ಜೊತೆಗೆ ಸಭೆ ಮಾಡುತ್ತೇವೆ. ಅಲ್ಲಿ, ಅನಿರ್ದಿಷ್ಟಾವಧಿ ಸತ್ಯಾಗ್ರಹದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ತದನಂತರ, ಎ.11 ರಂದು ಗುಲ್ಬರ್ಗಾ, ಬೀದರ್ ನಲ್ಲಿ ಸಭೆ ನಡೆಸಿ ಕುಂದುಕೊರತೆ ಕುರಿತು ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಎಸ್ಮಾ ಜಾರಿ: ರಾಜ್ಯ ಸರಕಾರ ಎಸ್ಮಾ ಜಾರಿ ಮಾಡಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಮಾ ವಿಶೇಷ ಸಂದರ್ಭದಲ್ಲಿ ಬಳಕೆ ಆಗಬೇಕು. ಕರ್ನಾಟಕದಲ್ಲಿ ಅಂತಹ ಸನ್ನಿವೇಶ ಸೃಷ್ಟಿಯಾಗಿಲ್ಲ. ಸರಕಾರದ ವೈಫಲ್ಯ ಕಾಣಿಸುತ್ತಿದೆ. ಅಲ್ಲದೆ, ಸಾರಿಗೆ ಸಚಿವರು ಮಾತುಕತೆ ಮಾಡಿಲ್ಲ. ಹೀಗಾಗಿ ಸತ್ಯಾಗ್ರಹ ಅನಿವಾರ್ಯ ಆಯಿತು ಎಂದು ತಿಳಿಸಿದರು.

ವೇತನ ಕಡಿತ: ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡುವುದಿಲ್ಲ ಎನ್ನುವುದು ತಪ್ಪು. ದುಡಿದಿರುವ ವೇತನ ನೀಡುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇಂತಹ ತಪ್ಪು ಸರಕಾರ ಮಾಡಬಾರದು ಎಂದು ಕೋಡಿಹಳ್ಳಿ ನುಡಿದರು.

`ವಾಸ್ತವ ಸ್ಥಿತಿ ವಿಜಯೇಂದ್ರಗೆ ಗೊತ್ತಿಲ್ಲ'

ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ಮುಷ್ಕರ ಕೈ ಬಿಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ವಿಜಯೇಂದ್ರಗೆ ವಾಸ್ತವ ಸ್ಥಿತಿ ಗೊತ್ತಿಲ್ಲ, ಅದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಮಸ್ಯೆ ಅರ್ಥ ಮಾಡಿಕೊಂಡು, ನಿಮ್ಮ ಸರಕಾರಕ್ಕೆ ಹೇಳಿ, ಶೋಷಣೆ ಮುಕ್ತ ಸಾರಿಗೆ ಮಾಡಿ ಎಂದು ತಿರುಗೇಟು ನೀಡಿದರು.

ಸರಕಾರ ಸ್ಪಂದಿಸಲಿ

ಸಾರಿಗೆ ನೌಕರರ ಬೇಡಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕು. ಜೊತೆಗೆ ಸಾರಿಗೆ ನೌಕರರು ಹಠಕ್ಕೆ ಬೀಳದೆ, ಕೆಲಸಕ್ಕೆ ಹಾಜರಾಗುವ ಮೂಲಕ ಪ್ರತಿಭಟಿಸಿ, ಸಾರ್ವಜನಿಕರು ತೊಂದರೆ ಆಗದಂತೆ ನೋಡಿಕೊಳ್ಳಿ.

-ಬಡಗಲಪುರ ನಾಗೇಂದ್ರ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News