ಕಾಂಗ್ರೆಸ್ ರಾಜಕಾರಣ ನೀತಿಯ ಮೇಲೆ ಹೊರತು ಜಾತಿಯ ಮೇಲಲ್ಲ: ಡಿ.ಕೆ.ಶಿವಕುಮಾರ್

Update: 2021-04-08 17:07 GMT

ಬೆಳಗಾವಿ, ಎ.8: ಕಾಂಗ್ರೆಸ್‍ಗೆ ಎಲ್ಲ ಸಮುದಾಯದವರೂ ಒಂದೇ. ಲಿಂಗಾಯತರಾಗಿರಲಿ, ಮರಾಠರಾಗಿರಲಿ, ಪರಿಶಿಷ್ಟರಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಅವರೆಲ್ಲರೂ ನಮ್ಮ ಅಣ್ಣ ತಮ್ಮಂದಿರು. ಬಿಜೆಪಿ ಮಾತ್ರ ಎಲ್ಲರನ್ನು ಬೇರೆ ಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ ನೀತಿಯ ಮೇಲೆ ರಾಜಕಾರಣ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವಿಚಾರವಾಗಿ ನಾನು ನಮ್ಮ ನಾಯಕರ ಜತೆ ಚರ್ಚೆ ನಡೆಸುತ್ತಿದ್ದೇನೆ. ಬೆಳಗ್ಗೆ ರೈತ ಮುಖಂಡರಾದ ಬಾಬಾಗೌಡ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಎಲ್ಲ ಕಮ್ಯುನಿಸ್ಟ್ ನಾಯಕರ ಜತೆ, ಚಾಲಕರ ಸಂಘ, ಆಟೋ ಚಾಲಕರು, ನೇಕಾರರನ್ನು ಭೇಟಿ ಮಾಡಲಿದ್ದೇನೆ. ಧರ್ಮಪೀಠಗಳಿಗೆ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದೇನೆ. ಅವರೆಲ್ಲ ಗೌರವದಿಂದ ನಮ್ಮ ಅಭ್ಯರ್ಥಿ ಬಗ್ಗೆ ಅನುಕಂಪ ಹೊಂದಿದ್ದಾರೆ ಎಂದರು.

ಈ ಸರಕಾರಕ್ಕೆ ಒಂದು ಸಂದೇಶವನ್ನೂ ಕಳುಹಿಸಬೇಕಿದೆ. ನೂರಾರು ದಿನದಿಂದ ನಮ್ಮ ರೈತರು ಧರಣಿ ಮಾಡುತ್ತಿದ್ದರೂ ಅವರನ್ನು ಮಾತನಾಡಿಸಿಲ್ಲ. ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರಿದ್ದು, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಮತದಾರರು ನಮಗೆ ಮತ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಲಿಂಗಾಯತರು, ಮರಾಠಿಗರು ನಮಗೆ ಅಣ್ಣತಮ್ಮಂದಿರು. ಅವರೆಲ್ಲ ನಮಗೆ ಒಂದೇ. ಎಲ್ಲ ಜನಾಂಗದವರೂ ಸೇರಿ ನಾವೆಲ್ಲರೂ ಒಂದು. ಬಿಜೆಪಿಯವರು ಬೇರೆ ಬೇರೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಮತದಾನ ಹಕ್ಕು ನೀಡಲಾಗಿದೆ. ಅವರೆಲ್ಲರೂ ಒಂದೇ. ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಜಗದೀಶ್ ಶೆಟ್ಟರ್ ಅವರಿಗೆ ಮಾತನಾಡಲು ಶಕ್ತಿ ನೀಡಿದ್ದೇವಲ್ಲ, ರೈಲು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಧೆಗಳು ಸೇರಿದಂತೆ ಎಲ್ಲ ಶಕ್ತಿಯನ್ನು ಕೊಟ್ಟಿರುವುದು ಕಾಂಗ್ರೆಸ್. ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ನಾವು ನೌಕರರಿಗೆ ಬೆಂಬಲ ನೀಡುತ್ತೇವೆ. ಸರಕಾರ ಅವರೊಂದಿಗೆ ಕೂತು, ಅವರ ನೋವು ಕೇಳಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಮುಷ್ಕರವನ್ನು ಹತ್ತಿಕುವ ಪ್ರಯತ್ನ ಮಾಡಬಾರದು. ಸರಕಾರ ಅವರ ಮೇಲೆ ನಡೆಸುತ್ತಿರುವ ಧೋರಣೆ ಸರಿಯಲ್ಲ ಎಂದು ಅವರು ತಿಳಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರ ನಡೆಸಿದ ಶಿವಕುಮಾರ್, ಇದೇ ಸಂದರ್ಭದಲ್ಲಿ ಬೆಳಗಾವಿಯ ಹುಕ್ಕೇರಿಯ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲದೆ, ಚಿಕ್ಕಬಾಗೇವಾಡಿಯಲ್ಲಿ ಮಾಜಿ ಸಂಸದ ಬಾಬಾಗೌಡ ಪಾಟೀಲ್‍ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News