ಗ್ರಾಮೀಣಾಭಿವೃದ್ಧಿ ವಿವಿ ಪ್ರಥಮ ಘಟಿಕೋತ್ಸವ: ಎಚ್.ಕೆ.ಪಾಟೀಲ್, ಅಶೋಕ ದಳವಾಯಿಗೆ ಗೌರವ ಡಾಕ್ಟರೇಟ್ ಪ್ರದಾನ

Update: 2021-04-10 19:06 GMT

ಗದಗ, ಎ. 10: ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಆವರಣದಲ್ಲಿ ಶನಿವಾರ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾನೂನು, ಸಾರ್ವಜನಿಕ ನೀತಿ ಮತ್ತು ಸಮಾಜ ಸೇವೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಗದಗ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಡಾಕ್ಟರ್ ಆಫ್ ಲಾಸ್(ಎಲ್‍ಎಲ್‍ಬಿ) ಗೌರವ ಡಾಕ್ಟರ್ ಪದವಿಯನ್ನು ಹಾಗೂ ದೇಶದ ಗ್ರಾಮೀಣ ಬುಡಕಟ್ಟು ಜನಾಂಗದ ಪುನರ್ ನಿರ್ಮಾಣದಲ್ಲಿ ಸಲ್ಲಿಸಿರುವ ಮಹತ್ತರ ಸೇವೆಗಾಗಿ ಹಿರಿಯ ಐಎಎಸ್ ಅಧಿಕಾರಿ ಡಾ.ಅಶೋಕ ದಳವಾಯಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ (ಡಿಲಿಟ್) ಗೌರವ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳೂ ಆಗಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಘಟಿಕೋತ್ಸವದ ಮುಖ್ಯ ಅತಿಥಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್ ಹಾಗೂ ಗ್ರಾಸ್ ರೂಟ್ಸ್ ರಿಸರ್ಚ್ ಆಂಡ್ ಅಡೊಕಸಿ ಮೂವ್‍ಮೆಂಟ್(ಗ್ರಾಮ್)ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಆರ್.ಬಾಲಸುಬ್ರಮಣ್ಯಂ, ಗ್ರಾಮೀಣಾಭಿವೃದ್ಧಿ ವಿವಿ ಕುಲಸಚಿವ ಪ್ರೊ. ವಿಷ್ಣುಕಾಂತ ಚಟಪಲ್ಲಿ, ರಿಜಿಸ್ಟ್ರಾರ್ ಬಸವರಾಜ ಲಕ್ಕಣ್ಣವರ, ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ., ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಪದವಿ ಪಡೆಯುವ ಅಭ್ಯರ್ಥಿಗಳು, ಪಾಲಕರು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News