ಸಿಎಂ ಬಿಎಸ್‍ವೈಗೆ ಮತ್ತೆ ಕಾಣಿಸಿಕೊಂಡ ಜ್ವರ: ರೋಡ್ ಶೋ ಮೊಟಕು

Update: 2021-04-15 16:36 GMT

ಬೆಳಗಾವಿ, ಎ.15: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರವಾಗಿ ಶಿವಾಜಿ ಗಾರ್ಡನ್‍ನಿಂದ ಆರಂಭಗೊಂಡ ರೋಡ್ ಶೋ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ರೋಡ್ ಶೋ ಮೊಟಕುಗೊಳಿಸಿದ ಪ್ರಸಂಗ ಜರುಗಿತು.

ನಿನ್ನೆಯಿಂದಲೂ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿ, ಇಂದು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು. ಅನಾರೋಗ್ಯದ ನಡುವೆಯೂ ಶಿವಾಜಿ ಗಾರ್ಡನ್‍ನಿಂದ ಶಾಸಕ ಅಭಯ್ ಪಾಟೀಲ್ ಮನೆಯವರೆಗೆ ರ್‍ಯಾಲಿ ಸಾಗಿತ್ತು. ಈ ವೇಳೆ ಉರಿ ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ಅಸ್ವತ್ಥರಾದಂತೆ ಕಂಡು ಬಂದ ಯಡಿಯೂರಪ್ಪ, ರೋಡ್ ಶೋ ಮೊಟಕುಗೊಳಿಸಿ ಖಾಸಗಿ ಹೊಟೇಲ್‍ಗೆ ತೆರಳಿ ವಿಶ್ರಾಂತಿ ಪಡೆದುಕೊಂಡರು. ಈ ವೇಳೆ ಖಾಸಗಿ ಆಸ್ಪತ್ರೆಯ ವೈದ್ಯರು ಮುಖ್ಯಮಂತ್ರಿಯ ಆರೋಗ್ಯ ತಪಾಸಣೆಯನ್ನು ನಡೆಸಿದರು.

ಸಿದ್ದರಾಮಯ್ಯ ಕೈ ಬೆರಳಿಗೆ ಗಾಯ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೈ ಬೆರಳಿಗೆ ನಿನ್ನೆ ಕಾರಿನ ಬಾಗಿಲು ತಗುಲಿದ ಪರಿಣಾಮ ಗಾಯಗೊಂಡಿದ್ದು, ವೈದ್ಯರು ಹೊಲಿಗೆ ಹಾಕಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಸಿದ್ದರಾಮಯ್ಯ ಯಾವುದೆ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳದೆ ವಿಶ್ರಾಂತಿಯ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News