9ನೆ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ: ದೀಪ ಬೆಳಗಿ ಪ್ರತಿಭಟಿಸಿದ ನೌಕರರು
Update: 2021-04-15 17:46 GMT
ಬೆಂಗಳೂರು, ಎ.15: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 9ನೆ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ರಾಜ್ಯಾದ್ಯಂತ ಸಾರಿಗೆ ನೌಕರರು ಸಂಜೆ 6ಗಂಟೆಯಿಂದ 7ರವರೆಗೆ ದೀಪ ಬೆಳಗುವ ಮೂಲಕ ಪ್ರತಿಭಟನೆ ನಡೆಸಿದರು.
ಗಾಂಧಿ ನಗರದ ಕಚೇರಿಯ ಬಳಿ ಸಾರಿಗೆ ನೌಕರರು ದೀಪವನ್ನು ಹಚ್ಚಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ನಗರದ ಡಾ.ರಾಜ್ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ದೀಪ ಬೆಳಗುವ ಮೂಲಕ ಚಳುವಳಿ ಆರಂಭಿಸಲಾಯಿತು.
'ಕ್ಯಾಂಡಲ್ ಲೈಟ್' ಹಿಡಿದು ಸಾರಿಗೆ ನೌಕರರು ಚಳವಳಿ ನಡೆಸಲು ಮುಂದಾದ ಹಿನ್ನೆಲೆ ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಬೆಂಗಳೂರಿನ ರಾಜ್ಯ ರಸ್ತೆ ಸಾರಿಗೆ ಕೂಟದ ಕಚೇರಿ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರು ಕ್ಯಾಂಡಲ್ ಚಳುವಳಿ ನಡೆಸುವ ಮೂಲಕ ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.