ಲಸಿಕೆ ಪರಿಣಾಮಕಾರಿಯಾಗಿದ್ದರೆ ಲಸಿಕೆ ಪಡೆದಿದ್ದ ಬಿಎಸ್‌ವೈಗೆ ಸೋಂಕು ತಗಲಿದ್ದು ಹೇಗೆ: ಕಾಂಗ್ರೆಸ್ ಪ್ರಶ್ನೆ

Update: 2021-04-16 13:01 GMT

ಬೆಂಗಳೂರು, ಎ.16: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎರಡನೇ ಬಾರಿಗೆ ಇಂದು ಕೊರೋನ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ 'ಲಸಿಕೆಗಳು ಪರಿಣಾಮಕಾರಿಯಾಗಿದ್ದರೆ ಲಸಿಕೆ ಪಡೆದಿದ್ದ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು ಹೇಗೆ, ಏಕೆ? ಎಂದು ಪ್ರಶ್ನಿಸಿದೆ.

ಈ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಲಸಿಕೆಗಳ ಪರಿಣಾಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಇಂದು ಪುರಾವೆ ಸಿಕ್ಕಿದೆಯಲ್ಲ. ಲಸಿಕೆಗಳು ಪರಿಣಾಮಕಾರಿಯಾಗಿದ್ದರೆ ಲಸಿಕೆ ಪಡೆದಿದ್ದ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು ಹೇಗೆ, ಏಕೆ? ಎಂದು ಪ್ರಶ್ನೆ ಎತ್ತಿದೆ.

ರಾಜ್ಯಾದ್ಯಂತ ಲಸಿಕೆ ಕೊರತೆಯಾಗಿರುವ ವರದಿಗಳು ಪ್ರತಿ ದಿನವೂ ಬರುತ್ತಿವೆ. ಆದರೂ ಆತ್ಮವಂಚನೆಯ ಸುಳ್ಳು ಹೇಳುವ ಬಿಜೆಪಿಗೆ ಕೊಂಚವೂ ಲಜ್ಜೆ ಇದ್ದಂತಿಲ್ಲ. ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸುವ ಅನುಮತಿಯನ್ನು ಕೇಂದ್ರ ಏಕೆ ನೀಡುತ್ತಿಲ್ಲ? ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಏಕೆ ತೋರುತ್ತಿಲ್ಲ ತಾವು? ಎಂದು ಕಾಂಗ್ರೆಸ್ ಟೀಕಿಸಿದ್ದು, ಕೊರೋನ ಸೋಂಕಿತರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ತಿಳಿಸಿದೆ.

ಕೊರೋನ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಈ ಹಿಂದೆ ಕೊರೋನ ಸೋಂಕಿತರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದರು. ಇಂತಹ ಸರ್ಕಾರದಿಂದ ಸೋಂಕು ನಿಯಂತ್ರಣ ಸಾಧ್ಯವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News