ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಮೃತ್ಯು

Update: 2021-04-18 13:11 GMT

ಮಡಿಕೇರಿ, ಎ.18: ಅಪಾಯಕಾರಿ ಮಲ್ಲಳ್ಳಿ ಜಲಪಾತದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಇಬ್ಬರು ಜಲ ಸಮಾಧಿಯಾಗಿದ್ದಾರೆ.

ಸುಂಟಿಕೊಪ್ಪದ 2ನೇ ವಿಭಾಗದ ನಿವಾಸಿ ಪೆಟ್ಟಿರಾಮ ಅವರ ಪುತ್ರ ಶಶಿಕುಮಾರ್ (32) ಹಾಗೂ ಮೊಮ್ಮಗಳು ದಿವ್ಯ (20) ಮೃತರು. 

ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಿಸಲೆಂದು ಇಂದು ಬೆಳಗ್ಗೆ ಆರು ಮಂದಿಯ ತಂಡ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ನೀರಿನ ಸೆಳೆತಕ್ಕೆ ಸಿಲುಕುತ್ತಿದ್ದ ದಿವ್ಯಾಳನ್ನು ರಕ್ಷಿಸಲು ಹೋದ ಸೋದರ ಮಾವ ಶಶಿಕುಮಾರ್ ಕೂಡ ನೀರು ಪಾಲಾದರು.

ಒಂದೂವರೆ ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಶಶಿಕುಮಾರ್ ಪತ್ನಿಯನ್ನು ಮತ್ತು ಮೃತೆ ದಿವ್ಯ ತಂದೆ ಉಣ್ಣಿಕೃಷ್ಣ ಹಾಗೂ ತಾಯಿ ಕಾಮಾಕ್ಷಿಯವರನ್ನು ಅಗಲಿದ್ದಾರೆ. ಎರಡೂ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ವೇಳೆಗೆ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ.

ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News