ಕೂಡಲೇ ಮುಷ್ಕರ ನಿಲ್ಲಿಸಿ, ಸೇವೆ ಆರಂಭಿಸಿ: ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ

Update: 2021-04-20 12:26 GMT

ಬೆಂಗಳೂರು, ಎ.20: ಕೊರೋನ ಸಂಕಷ್ಟದ ಸಮಯದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ಈ ಕೂಡಲೇ ಸಾರಿಗೆ ಮುಷ್ಕರವನ್ನು ನಿಲ್ಲಿಸಿ, ಸೇವೆ ಆರಂಭಿಸಿ ಎಂದು ಸಾರಿಗೆ ನೌಕರರಿಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ನಾಲ್ಕು ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ನಿಮ್ಮ ಬೇಡಿಕೆಗಳನ್ನು ಕಾಯ್ದಿರಿಸಿ, ಸೇವೆ ಆರಂಭಿಸಲು ನೌಕರರಿಗೆ ಸೂಚನೆ ನೀಡಿತು. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಎ.22ರ ಬೆಳಗ್ಗೆ 11.40ಕ್ಕೆ ಮುಂದೂಡಿತು.

ಸರಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲಾಗಿದೆ. ಸರಕಾರ ಕಾರ್ಮಿಕರ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದೆ. ಸಾರಿಗೆ ನೌಕರರ ಮುಷ್ಕರ ಕಾನೂನು ಬಾಹಿರವೆಂದು ಘೋಷಿಸಲಾಗಿದೆ. ಕೆಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಸರಕಾರಿ ನೌಕರರಾಗಿಸುವ ಬೇಡಿಕೆ ಪರಿಗಣಿಸುವುದು ಸಾಧ್ಯವಿಲ್ಲ. ಅಲ್ಲದೆ, ಸಾರಿಗೆ ನೌಕರರಲ್ಲಿ ಕೆಲವರಾದರೂ ಸೇವೆಗೆ ಹಾಜರಾಗುತ್ತಿದ್ದು, ಪರಿಸ್ಥಿತಿ ಹಿಂದಿಗಿಂತ ಉತ್ತಮವಾಗಿದೆ ಎಂದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಸಾರಿಗೆ ನೌಕರರ ಮುಷ್ಕರದ ಕುರಿತು ಬೇಸರ ವ್ಯಕ್ತಪಡಿಸಿತು. ಸಾರಿಗೆ ನೌಕರರ ಮುಷ್ಕರ ಸರಿಯೋ ತಪ್ಪೋ ಅದು ಎರಡನೆ ವಿಚಾರ. ಆದರೆ, ಮೊದಲಿಗೆ ಸಾರಿಗೆ ಸೇವೆ ಜನರಿಗೆ ಲಭ್ಯವಾಗಬೇಕು. ರಾಜ್ಯದಲ್ಲಿ ಕೊರೋನ ಶೀಘ್ರವಾಗಿ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಕೆಲಸಕ್ಕೆ ತೆರಳಲು, ಸೋಂಕು ಪರೀಕ್ಷೆಗೆ, ಚಿಕಿತ್ಸೆಗೆ ತೆರಳಲು ಸಾರಿಗೆ ಸೇವೆ ಅತ್ಯಗತ್ಯ. ಹೀಗಾಗಿ ಪ್ರಸಕ್ತ ಸಂದರ್ಭ ಮುಷ್ಕರ ಹೂಡುವುದು, ಸಂವಿಧಾನದ ವಿಧಿ 21ರ ಅಡಿ ಜನಸಾಮಾನ್ಯರಿಗೆ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಅಲ್ಲದೇ, ನೌಕರರ ಬೇಡಿಕೆಗಳು ಕಾನೂನು ಬದ್ಧವಾಗಿಯೇ ಇರಬಹುದು. ಆದರೆ, ಪ್ರಸಕ್ತ ಸಂದರ್ಭದಲ್ಲಿ ಸಾರಿಗೆ ಸೇವೆ ತುರ್ತು ಅಗತ್ಯವಾಗಿದ್ದು, ಕೂಡಲೇ ಕಾರ್ಯಾರಂಭ ಮಾಡುವುದು ಸೂಕ್ತ ಎಂದಿತು. ಜತೆಗೆ, ಸಾರಿಗೆ ನೌಕರರು ತಮ್ಮ ಬೇಡಿಕೆಯನ್ನು ಹಿಂಪಡೆಯದೆಯೂ ಮುಷ್ಕರ ಕೈಬಿಟ್ಟು ಜನಸಾಮಾನ್ಯರಿಗೆ ಸೇವೆ ನೀಡಲು ಮುಂದಾಗುತ್ತಾರೆ ಎಂದು ನ್ಯಾಯಾಲಯಕ್ಕೆ ಈಗಲೂ ಭರವಸೆ ಇದೆ ಎಂದು ಅಭಿಪ್ರಾಯಪಟ್ಟು ವಿಚಾರಣೆ ಮುಂದೂಡಿತು.

ಸಾರಿಗೆ ನೌಕರರ ಮುಷ್ಕರ ತಡೆಹಿಡಿಯಲು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು(ಎಸ್ಮಾ) ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೋರಿ ಹೈಕೋರ್ಟ್ ಗೆ  ಅರ್ಜಿ ಸಲ್ಲಿಕೆಯಾಗಿತ್ತು. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮತ್ತು ಸರಕಾರದ ನಡುವೆ ಮಧ್ಯವಸ್ಥಿಕೆ ವಹಿಸಿ, ಶಾಶ್ವತ ಪರಿಹಾರ ಸೂಚಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರ್ಟ್ ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು. ಹೀಗೆ, ನಾಲ್ಕು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ. 

ಮೂಲಭೂತ ಹಕ್ಕಿನ ಉಲ್ಲಂಘನೆ
‘ರಾಜ್ಯದಲ್ಲಿ ಕೊರೋನ ಶೀಘ್ರವಾಗಿ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಕೆಲಸಕ್ಕೆ ತೆರಳಲು, ಸೋಂಕು ಪರೀಕ್ಷೆಗೆ, ಚಿಕಿತ್ಸೆಗೆ ತೆರಳಲು ಸಾರಿಗೆ ಸೇವೆ ಅತ್ಯಗತ್ಯ. ಪ್ರಸಕ್ತ ಸಂದರ್ಭ ಮುಷ್ಕರ ಹೂಡುವುದು, ಸಂವಿಧಾನದ ವಿಧಿ 21ರ ಅಡಿ ಜನಸಾಮಾನ್ಯರಿಗೆ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ.’
-ಎ.ಎಸ್.ಓಕ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ 

ನ್ಯಾಯಾಲಯದ ಆದೇಶ ಗೌರವಿಸುತ್ತೇವೆ
‘ಸಾರಿಗೆ ಮುಷ್ಕರ ನಿಲ್ಲಿಸುವ ವಿಚಾರ ಸಂಬಂಧ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನ್ಯಾಯಾಲಯದ ಪೂರ್ಣ ಪ್ರಮಾಣದ ಆದೇಶವನ್ನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.’ 
-ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News