ಇಪ್ಪತ್ತು ವರ್ಷಗಳ ಬಳಿಕ ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಸತೀಶ್ ಜಾರಕಿಹೊಳಿ ವಿಶ್ವಾಸ

Update: 2021-04-20 15:15 GMT

ಬೆಳಗಾವಿ, ಎ.20: ಇಪ್ಪತ್ತು ವರ್ಷಗಳ ಬಳಿಕ ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಈ ವಿಶ್ವಾಸ ನನಗೆ, ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಮಂಗಳವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಎಲ್ಲ ಕಡೆ ಒಳ್ಳೆಯ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ. ಗೋಕಾಕ್ ಕ್ಷೇತ್ರ ಸೇರಿ ಎಲ್ಲ ಕಡೆ ಜನರು ಕೈ ಹಿಡಿದೇ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಕಡೆ ನಮಗೆ ಉತ್ತಮ ಫಲಿತಾಂಶ ಬರಲಿದೆ. ಬಿಜೆಪಿಗೆ ಜನರು ಈ ಬಾರಿ ಮತವನ್ನು ನೀಡಿಲ್ಲ. ಜತೆಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಕಡಿಮೆ ಆದರೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.

ಕೊರೋನ ನಿಯಂತ್ರಣದಲ್ಲಿ ಸರಕಾರ ವಿಫಲ: ಬೆಳಗಾವಿ ಜಿಲ್ಲೆಯಲ್ಲಿ 4 ಜನ ಮಂತ್ರಿಗಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯವರೆಗೂ ಒಂದು ಸಭೆಯನ್ನು ಕೂಡಾ ಮಾಡಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೆಂದು ಕೈಚಲ್ಲಿ ಕುಳಿತುಕೊಳ್ಳದೇ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಬೇಕು. ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

‘ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಬಾರದು, ಇದರಿಂದಾಗಿ ಕಾರ್ಖಾನೆ ಸೇರಿ ಎಲ್ಲವೂ ಬಂದ್ ಆಗಲಿವೆ. ಇದರಿಂದ ಯುವಕರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಈಗಾಗಲೇ ಕಳೆದ ವರ್ಷದ ಲಾಕ್‍ಡೌನ್‍ನಿಂದ ಜನರು ಚೇತರಿಸಿಕೊಂಡಿಲ್ಲ. ಮತ್ತೆ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡರೆ ಜನ ಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಲಿದೆ.’

-ಸತೀಶ್ ಜಾರಕಿಹೊಳಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News