ಸಂಸದ ಶ್ರೀನಿವಾಸಪ್ರಸಾದ್ ಆಪ್ತ ಸಹಾಯಕ ಕೋರೋನ ಸೋಂಕಿನಿಂದ ನಿಧನ

Update: 2021-04-20 17:55 GMT

ಮೈಸೂರು,ಎ.20: ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಆಪ್ತ ಸಹಾಯಕ ಬಿ.ಎಸ್.ಶಂಕರನ್ (76) ಅವರು ಮಂಗಳವಾರ ಕೋರೋನ ಸೋಂಕಿಗೆ ಒಳಗಾಗಿ ನಿಧನರಾಗಿದ್ದಾರೆ.

ಕುವೆಂಪುನಗರ ನವಿಲು ರಸ್ತೆಯ ನಿವಾಸಿಯಾಗಿದ್ದ ಶಂಕರನ್ ಮೂಲತಃ ಕೆ.ಆರ್.ನಗರ ತಾಲೂಕಿನ ಬಸವಪಟ್ಟಣದ ಗ್ರಾಮದವರು. 1986ರಿಂದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಆಪ್ತ ಸಹಾಯಕರಾಗಿ ಕಳೆದ 35 ವರ್ಷ ಕಾರ್ಯ ನಿರ್ವಹಿಸುತ್ತಿದ್ದರು. ಸೌಮ್ಯ ಸ್ವಭಾವದ ಹಾಗೂ ಪ್ರಾಮಾಣಿಕತೆಯ ಶಂಕರನ್ ಕ್ಷೇತ್ರದ ಜನರು ಹಾಗೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಹತ್ತಿರವಾಗಿದ್ದರು.

ಆಪ್ತ ಸಹಾಯಕರಾಗಿ ಸೇರುವ ಮೊದಲು ಪ್ರಾಚೀನ ಮತ್ತು ಪುರಾತತ್ವ ಇಲಾಖೆಯ ಬೆಂಗಳೂರಿನ ಕಚೇರಿ ಹಾಗೂ ಪಿರಿಯಾಪಟ್ಟಣ ತಂಬಾಕು ಮಂಡಳಿಯಲ್ಲಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.

10 ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಶಂಕರನ್ ಅವರನ್ನು ಮೈಸೂರಿನ ಬಾನಾವಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News