ಸಾರಿಗೆ ನೌಕರರ ಮುಷ್ಕರ ಅಂತ್ಯ: ರಾಜ್ಯದೆಲ್ಲೆಡೆ ಬಸ್ ಸಂಚಾರ ಪುನರ್ ಆರಂಭ
ಬೆಂಗಳೂರು, ಎ.21: 6ನೇ ವೇತನ ಆಯೋಗ ಶಿಫಾರಸ್ಸು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪಟ್ಟುಹಿಡಿದು ಸತತ ಹದಿನಾಲ್ಕು ದಿನಗಳಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ನೌಕರರು ನಡೆಸುತ್ತಿದ್ದ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದ್ದು, ರಾಜ್ಯದೆಲ್ಲೆಡೆ ಬಸ್ ಸಂಚಾರ ಆರಂಭವಾಗಿದೆ.
ಈ ಕುರಿತು ಮುಷ್ಕರದ ನೇತೃತ್ವ ವಹಿಸಿದ್ದ ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಹೈಕೋರ್ಟ್ ಸೂಚನೆಗೆ ಗೌರವ ನೀಡಿ, ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.
ನ್ಯಾಯಾಲಯ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ನಾವು ತಿರಸ್ಕಾರ ಮಾಡುವುದಿಲ್ಲ. ಎ.22ರಿಂದ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗಲು ನಿರ್ದೇಶನ ನೀಡಿದ್ದೇವೆ ಎಂದ ಅವರು, ಬೇಡಿಕೆ ಈಡೇರಿಕೆ ಸಂಬಂಧ ನ್ಯಾಯಾಲಯಕ್ಕೆ ನಾವು ಅರ್ಜಿ ಹಾಕಲಿದ್ದು, ಕಾನೂನು ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಅಮಾನತು ಕೈಬಿಡಿ: ರಾಜ್ಯ ಸರಕಾರ ಮುಷ್ಕರವನ್ನು ಬೆಂಬಲಿಸಿದ ಆರೋಪದ ಮೇಲೆ 2,169 ನೌಕರರನ್ನು ಕಾರಣ ಇಲ್ಲದೆ ಅಮಾನತು ಮಾಡಿದೆ. ಜತೆಗೆ ಸಾವಿರಾರು ಸಿಬ್ಬಂದಿಯನ್ನು ಉದ್ದೇಶ ಪೂರ್ವಕವಾಗಿ ವರ್ಗಾವಣೆಗೊಳಿಸಿದೆ. ಇಂತಹ ಬೆಳವಣಿಗೆ ಸರಿಯಲ್ಲ. ಈ ಕೂಡಲೇ ಇದನ್ನು ತೆರವು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಸರಕಾರ ಗಮನ ಹರಿಸಿಲ್ಲ. ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಆರೋಗ್ಯ ಸರಿ ಇಲ್ಲ. ಮುಂದಿನ ಮೇ ತಿಂಗಳಿನಲ್ಲಿ ಚರ್ಚಿಸೋಣ ಎಂದು ಭರವಸೆ ನೀಡಲಾಗಿದೆ ಎಂದರು.
ಡಿಸೆಂಬರ್ ನಲ್ಲಿ ಕೊಟ್ಟಿರುವ ಬೇಡಿಕೆ ಈಡೇರಿಸುವ ಕೆಲಸ ಸರಕಾರ ಮಾಡಲಿ. ನ್ಯಾಯಾಲಯದ ಮೇಲೂ ನಮಗೆ ಇದೆ. ಇನ್ನು, ನ್ಯಾಯಾಲಯದ ಸೂಚನೆ ಮೇರೆಗೆ ಹಲವರು ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ, ಮುಂದೆ ಮುಷ್ಕರದಲ್ಲಿ ಭಾಗಿಯಾಗಲ್ಲ ಎಂದು ಸರಕಾರ ಮುಚ್ಚಳಿಕೆ ಬರೆಸಿಕೊಳ್ಳುತ್ತಿದೆ. ಹೋರಾಟ ನಮ್ಮ ಮೂಲಭೂತ ಹಕ್ಕು. ಇದನ್ನು ಕಸಿದುಕೊಳ್ಳುವ ಕೆಲಸ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಧನ್ಯವಾದ: ಲಕ್ಷ್ಮಣ ಸವದಿ
ಸರಕಾರದ ಮನವಿಗೆ ಓಗುಟ್ಟು ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಧನ್ಯವಾದ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ನುಡಿದರು. ಮುಷ್ಕರ ಮುಂದೂಡಿಕೆ ಕುರಿತು ಬುಧವಾರ ಪ್ರತಿಕ್ರಿಯಿಸಿದ ಅವರು, ರಾಜ್ಯಾದ್ಯಂತ ಸಾರಿಗೆ ನಿಗಮಗಳ ಸುಮಾರು 13 ಸಾವಿರದಷ್ಟು ಬಸ್ಸುಗಳು ಸಂಚರಿಸಿರುವುದರಿಂದ ಸಾರ್ವಜನಿಕರು ಸಮಾಧಾನ ಪಡುವಂತಾಯಿತು. ಹೀಗೆ ಕರ್ತವ್ಯ ಪ್ರಜ್ಞೆ ಮೆರೆದವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದರು.
ಅದೇ ರೀತಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲಕರಲ್ಲಿ ಕೋರಿಕೊಂಡಾಗ ಅವರೂ ಸಹ ತುಂಬು ಹೃದಯದಿಂದ ಸಹಕಾರ ನೀಡಿದ್ದನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ತಿಳಿಸಿದರು.
ಗುರುವಾರದಿಂದ ನಮ್ಮ ನೌಕರ ಬಾಂಧವರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಸುಗಮಗೊಳ್ಳುತ್ತದೆ ಎಂಬ ವಿಶ್ವಾಸ ಮೂಡುವಂತಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದ ಅವರು, ಮುಷ್ಕರದ ಸಂದರ್ಭದಲ್ಲಿಯೂ ಹಲವು ಮಂದಿ ಸಾರಿಗೆ ನೌಕರರು ಸರಕಾರದ ಮನವಿಗೆ ಸ್ಪಂದಿಸಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಈ ಸಂಕಷ್ಟದ ಕಾಲದಲ್ಲಿಯೂ ಸೇವೆ ಒದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು.
287 ಕೋಟಿ ನಷ್ಟ
ಎ.7ರಿಂದ ಸತತ ಹದಿನೈದು ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳಲ್ಲೂ ಒಟ್ಟು 287 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
14 ದಿನಗಳ ಕಾಲ ಪ್ರಯಾಣಿಕರ ಸಂಕಷ್ಟ
ಸಾರಿಗೆ ನೌಕರರು ರಾಜ್ಯಾದ್ಯಂತ ಎ.7ರಿಂದ ಮುಷ್ಕರ ಆರಂಭಿಸಿದ ಪರಿಣಾಮ ಸತತ ಹದಿನಾಲ್ಕು ದಿನಗಳ ಕಾಲ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಮತ್ತೊಂದೆಡೆ ಖಾಸಗಿ ಬಸ್ಗಳ ಮೇಲೂ ಪ್ರಯಾಣಿಕರು ಅವಲಂಬಿಸಿದ ಪರಿಣಾಮ ದುಪ್ಪಟ್ಟು ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೋವಿಡ್ ಪರೀಕ್ಷೆ
ಬುಧವಾರ ಮಧ್ಯಾಹ್ನವೇ ಕರ್ತವ್ಯಕ್ಕೆ ಹಾಜರಾದ ಹಲವು ಸಾರಿಗೆ ನೌಕರರನ್ನು ಬಿಎಂಟಿಸಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಕೋವಿಡ್ ಪರೀಕ್ಷೆಗೆ ಸೂಚಿಸಿದರು.