ಕೋವಿಡ್ ಸೋಂಕಿತರ ಜೀವ ಉಳಿಸಲು ಸರಕಾರ ಏನು ಕ್ರಮ ಕೈಗೊಂಡಿದೆ?: ಎಚ್‍ಡಿಕೆ

Update: 2021-04-21 12:22 GMT

ಬೆಂಗಳೂರು, ಎ.21: ಕೋವಿಡ್ ತಡೆಯುವ ಕುರಿತು ಸರಕಾರ ಮ್ಯಾರಥಾನ್ ಸಭೆಗಳನ್ನು ಮಾಡಿದೆ, ವಿರೋಧ ಪಕ್ಷದ ನಾಯಕರ ಸಲಹೆ ಪಡೆದಿದೆ. ಜನರನ್ನು ಸೋಂಕಿನಿಂದ ದೂರವಿಡಲು ಮಾರ್ಗಸೂಚಿಗಳನ್ನು ಮಂಗಳವಾರ ಪ್ರಕಟಿಸಿದೆ. ಆದರೆ, ಈಗಾಗಲೇ ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು, ಅವರ ಜೀವ ಉಳಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರಕಾರ ಮಾತಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಮಂಗಳವಾರದ ಸಭೆಯ ನಂತರ ಜನರಿಗೆ ಕೇವಲ ಮಾರ್ಗಸೂಚಿಗಳನ್ನು ಮಾತ್ರ ಸೂಚಿಸಲಾಯಿತು. ಸೋಂಕಿನಿಂದ ದೂರ ಇರುವ ಸಲಹೆ ನೀಡಲಾಯಿತು. ಆದರೆ, ಈಗಾಗಲೇ ಅಸ್ಪತ್ರೆಗಳಲ್ಲಿರುವವರ ರಕ್ಷಣೆಗಾಗಿ ಏನು ಮಾಡಲಾಗಿದೆ, ಏನೇನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಭೆಯ ನಂತರ ಸರಕಾರ ಹೇಳಿಲ್ಲ ಏಕೆ? ಸೋಂಕಿತರ ಪರಿಸ್ಥಿತಿಯನ್ನು ಸರಕಾರ ಅರಿತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ಕೋವಿಡ್‍ನ ಎರಡನೇ ಅಲೆ ಬರುವುದಾಗಿ ಸರಕಾರಕ್ಕೆ ತಜ್ಞರು, ವಿಪಕ್ಷ ನಾಯಕರು ಹೇಳುತ್ತಲೇ ಬಂದಿದ್ದಾರೆ. ವರದಿಗಳನ್ನು ಪಡೆದುಕೊಂಡ ಸರಕಾರ ಈವರೆಗೆ ಏನು ಮಾಡಿಕೊಂಡಿತ್ತು? ಕೋವಿಡ್ ಬಂದಿದ್ದು ಒಂದೂವರೆ ವರ್ಷಗಳ ಹಿಂದೆ. ಮುಂದೊಂದು ದಿನ ರಾಕ್ಷಸ ರೂಪಿಯಾಗಬಹುದಾದ ಈ ರೋಗದ ವಿರುದ್ಧ ಸರಕಾರ ಈವರೆಗೆ ಮಾಡಿಕೊಂಡ ಸಿದ್ಧತೆಗಳು ಏನಾಗಿದ್ದವು? ಎಂದು ಅವರು ಅವರು ಕೇಳಿದ್ದಾರೆ.

ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಪರಿಕರಗಳ ಅಭಾವದ ಬಗ್ಗೆ ನಾನು ಈಗಾಗಲೇ ಮಾತಾಡಿದ್ದೇನೆ. ಎಚ್ಚರಿಕೆಯನ್ನೂ ನೀಡಿದ್ದೇನೆ. ಇದರ ಬಗ್ಗೆ ಏನು ಕ್ರಮ ಕೈಗೊಂಡಿದೆ ಸರಕಾರ? ಚಿಕಿತ್ಸೆಯೇ ದುರ್ಬರವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ಹಂತದಲ್ಲಿ ಕುಗ್ಗಿ ಹೋಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ಸರಕಾರ ಕ್ರಮ ಕೈಗೊಂಡಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಚಿಂತಾಜನಕ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ಆಮ್ಲಜನಕ ಸಿಗುತ್ತಿಲ್ಲ. ರೆಮ್‍ಡಿಸಿವಿರ್ ಔಷಧವೂ ಸಿಗುತ್ತಿಲ್ಲ ಎಂಬುದರ ಬಗ್ಗೆ ಕೆಲವು ದಿನಗಳಿಂದ ಎಚ್ಚರಿಸುತ್ತಲೇ ಬಂದಿದ್ದೇನೆ. ಅತ್ಯಗತ್ಯವಾಗಿರುವ ಈ ಸವಲತ್ತುಗಳನ್ನು ಸರಕಾರ ಹೊಂದಿಸುವ ಪ್ರಯತ್ನ ಮಾಡಿದೆಯೇ? ಇದನ್ನು ಮೊದಲು ಹೇಳಲಿ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಒಂದೆಡೆ ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತರು ಪರದಾಡುತ್ತಿದ್ದಾರೆ. ಆರೋಗ್ಯ ಸೇವೆ ಒದಗಿಸಲಾಗದ ಸರಕಾರದ ದೈನೇಸಿ ಸ್ಥಿತಿಯ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರಕಾರ ಮಾಡಬೇಕಲ್ಲವೇ? ಜನರ ರಕ್ಷಣೆಗಾಗಿ ಮಾಡಿಕೊಂಡಿರುವ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರಕಾರ ಹೇಳಬೇಕಲ್ಲವೇ? ಎಂದು ಅವರು ಆಗ್ರಹಿಸಿದ್ದಾರೆ.

‘ಜನರನ್ನು ಯಾವುದೇ ಹಂತದಲ್ಲಿ ಸರಕಾರ ರಕ್ಷಣೆ ಮಾಡುತ್ತದೆ. ಅವರ ಜೀವಕ್ಕೆ ಆಧಾರವಾಗಿರುತ್ತದೆ,' ಎಂಬ ವಿಶ್ವಾಸವನ್ನು ತುಂಬುವುದು ಅಗತ್ಯ. ಅದು ಬಿಟ್ಟು ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡರೂ ಅದು ನಗಣ್ಯ. ಈ ವಿಷಯವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಕೊರತೆ ನೀಗಿಸುವ ಕ್ರಮಗಳ ಬಗ್ಗೆ ಸರಕಾರ ಮಾತಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News