ಕೋವಿಡ್ ಹತೋಟಿಗೆ ಸಿಐಐ ಸಹಯೋಗದಲ್ಲಿ ಟಾಸ್ಕ್ ಫೋರ್ಸ್: ಸಚಿವ ಡಾ.ಕೆ.ಸುಧಾಕರ್

Update: 2021-04-24 16:31 GMT

ಬೆಂಗಳೂರು, ಎ.24: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸಮರ್ಥವಾಗಿ ಹತೋಟಿಗೆ ತರಲು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಹಯೋಗದಲ್ಲಿ ಟಾಸ್ಕ್ ಫೋರ್ಸ್ ರಚಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಶನಿವಾರ ನಗರದಲ್ಲಿ ಸಿಐಐ ಪ್ರತಿನಿಧಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ರಾಜ್ಯದಲ್ಲಿ ಕೊರೋನ ಪರಿಸ್ಥಿತಿಯನ್ನು ನಿಯಂತ್ರಿಸಲು ಸಿಐಐ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ. ಈ ಸಮಿತಿಯು ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಬಲಪಡಿಸುವ ಕಾರ್ಯ ಮಾಡಲಿದೆ ಎಂದರು.

ಕೊರೋನ ಕುರಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಲ್ ಸೆಂಟರ್, ಮಾಡ್ಯೂಲರ್ ಐಸಿಯುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಟಾಸ್ಕ್ ಫೋರ್ಸ್ ಮುಂದಾಳತ್ವ ವಹಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಆರೋಗ್ಯ ವಲಯದಲ್ಲಿ ತಂತ್ರಜ್ಞಾನ ಬಳಕೆ, ಔಷಧಿಗಳ ಪೂರೈಕೆ, ವೈದ್ಯಕೀಯ ಸಾಧನ, ಉಪಕರಣಗಳ ಪೂರೈಕೆ, ತಂತ್ರಾಂಶ ಒದಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಟಾಸ್ಕ್ ಫೋರ್ಸ್ ರಾಜ್ಯ ಸರಕಾರಕ್ಕೆ ನೆರವು ನೀಡಲಿದೆ ಎಂದು ಸುಧಾಕರ್ ಹೇಳಿದರು.

ಕಾಲ್ ಸೆಂಟರ್: ಕೋವಿಡ್ ನಿರ್ವಹಣೆ ಮಾಡಲು ಕೆಲ ಸಹಾಯವಾಣಿಗಳಿವೆ. ಆದರೆ ಇದರಿಂದಾಗಿ ಜನರಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಇದಕ್ಕಾಗಿ ಒಂದು ಬೃಹತ್ ಕಾಲ್ ಸೆಂಟರ್ ನಿರ್ಮಿಸಿ ಎಲ್ಲವನ್ನೂ ಸಮನ್ವಯಗೊಳಿಸುವ ವ್ಯವಸ್ಥೆ ತರಬೇಕಿದೆ. ಈ ಕಾರ್ಯವನ್ನು ಟಾಸ್ಕ್ ಫೋರ್ಸ್‍ಗೆ ವಹಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರು ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ಟಾಸ್ಕ್ ಫೋರ್ಸ್ ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತಾಗಿ ಸರಕಾರಕ್ಕೆ ನೆರವು ನೀಡಲಿದೆ. ಕೋವಿಡ್ ರೋಗಿಗಳಿಗಾಗಿ ರಾಜ್ಯದಲ್ಲಿ 3,000-5,000 ಮಾಡ್ಯೂಲರ್ ಐಸಿಯು ಹಾಸಿಗೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೂ ಟಾಸ್ಕ್ ಫೋರ್ಸ್ ನೆರವಾಗಲಿದೆ. ಕೆಲ ಕಂಪನಿಗಳು ಕೇವಲ 7-10 ದಿನಗಳಲ್ಲಿ ಇಂತಹ ಐಸಿಯು ರೂಪಿಸುವುದಾಗಿ ತಿಳಿಸಿವೆ ಎಂದು ಅವರು ಹೇಳಿದರು.

ಕಂಪನಿಗಳ ಸಿಎಸ್‍ಆರ್ ಅನುದಾನವನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲು ಕೇಂದ್ರ ಸರಕಾರ ಸಲಹೆ ನೀಡಿದೆ. ಎಲ್ಲ ಉದ್ಯಮಗಳು ಸಿಎಸ್‍ಆರ್ ಅನುದಾನವನ್ನು ಕೊರೋನ ನಿಯಂತ್ರಣಕ್ಕೆ ನೀಡಬೇಕು. ಅದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ನೆರವು ನೀಡಬೇಕು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಶೇ.95ರಷ್ಟು ರೋಗಿಗಳು ಮನೆ ಆರೈಕೆಯಲ್ಲಿದ್ದು, ಅವರಿಗೆ ತಂತ್ರಜ್ಞಾನದ ಮೂಲಕ ಮಾರ್ಗದರ್ಶನ ನೀಡಲು ತಂತ್ರಜ್ಞಾನ ಅಗತ್ಯ. ಹಾಗೆಯೇ ರೆಮ್ ಡಿಸಿವಿರ್, ಟೊಸಿಲಿಜುಮಾಬ್ ಔಷಧಿಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ನೆರವಾಗಬೇಕು ಎಂದು ಅವರು ಮನವಿ ಮಾಡಿದರು.

ಸಿಐಐ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ವಿಕ್ರಮ್ ಕಿರ್ಲೋಸ್ಕರ್, ವೈದ್ಯ ಡಾ.ದೇವಿಶೆಟ್ಟಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News