ಓ ಮೆಣಸೇ...

Update: 2021-04-25 19:30 GMT

ಕೊರೋನ ಕಾರಣದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರಲಿದೆ- ರಘುಪತಿ ಭಟ್, ಶಾಸಕ
ಕೊರೊನ ಕಾರಣದಿಂದ ಬಂದ ಕೆಟ್ಟ ಹೆಸರನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತೊಳೆಯುವ ಉದ್ದೇಶವೇ.


ಕೆಲವರು ಹಣದಾಸೆಗೆ ಜೋತಿಷ್ಯ ಶಾಸ್ತ್ರವನ್ನು ದುರ್ಬಳಕೆ ಮಾಡಿಕೊಳ್ಳ್ಳುತ್ತಿದ್ದಾರೆ -ವಿ.ಸೋಮಣ್ಣ, ಸಚಿವ
ನೇರವಾಗಿ ರಾಜಕೀಯ ಸೇರಿ. ಅದನ್ನು ದುರ್ಬಳಕೆ ಮಾಡಿದರೆ ಕೇಳುವವರೇ ಇಲ್ಲ.


ಆಮ್ಲಜನಕದ ಕೊರತೆ ಬಗ್ಗೆ ಮಾತನಾಡಲು ಪ್ರಧಾನಿ ಮೋದಿಗೆ ಫೋನ್ ಮಾಡಿದ್ದೆ ಅವರು ಪ.ಬಂ.ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಭಾಷಣಗಳ ಮೂಲಕ ಆಮ್ಲಜನಕ ಉತ್ಪತ್ತಿ ಮಾಡುತ್ತಿದ್ದಾರೆ.


ಕುಂಭ ಮೇಳದಲ್ಲಿ ಪಾಲ್ಗೊಂಡು ತಮ್ಮ ರಾಜ್ಯಗಳಿಗೆ ಮರಳಿದವರು ಕೊರೋನವನ್ನು ಪ್ರಸಾದದಂತೆ ಹಂಚಿದ್ದಾರೆ -ಕಿಶೋರಿ ಪೆಡ್ನೇಕರ್, ಮುಂಬೈ ಮೇಯರ್
ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡು ಹಂಚಿರೋದೇನು?


ಚುನಾವಣೆಗಳಿಗೂ ಕೋವಿಡ್ ಸಂಖ್ಯೆ ಹೆಚ್ಚಳಕ್ಕೂ ನಂಟು ಕಲ್ಪಿಸುವುದು ಸರಿಯಲ್ಲ -ಅಮಿತ್ ಶಾ, ಕೇಂದ್ರ ಸಚಿವ
ಆಕ್ಸಿಜನ್‌ಗಳ ಕೊರತೆಗೂ ಚುನಾವಣೆಗಳಿಗೂ ಸಂಬಂಧ ಕಲ್ಪಿಸಬಹುದೇ?


ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ ನಾಯಕರು ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ ರಾಹುಲ್, ಪ್ರಿಯಾಂಕಾ, ಸೋನಿಯಾ ಅವರನ್ನು ನಾಯಕರು ಎನ್ನಲಾಗದು -ಸಿ.ಟಿ.ರವಿ, ಮಾಜಿ ಸಚಿವ
ಕೊರೋನ ಮೋದಿಯನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ.


ಕೊರೋನ ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಸರಕಾರಿ ಆಸ್ಪತ್ರೆಗಳು ನರಕ ಹಾಗೂ ಯಮಲೋಕವಾಗುತ್ತಿದೆ -ವಾಟಾಳ್ ನಾಗರಾಜ್, ಹೋರಾಟಗಾರ
ಯಮನ ವಾಹನ ಕೋಣನ ಮೇಲೆ ಕುಳಿತು ಪ್ರತಿಭಟನೆ ಮಾಡಬಾರದೇ?


ದೇಶವನ್ನು ಮುನ್ನಡೆಸುತ್ತಿರುವುದು ಸರಕಾರವಲ್ಲ, ಒಂದು ಸಾರ್ವಜನಿಕ ಸಂಸ್ಥೆ -ಸೀತಾರಾಮ್ ಯಚೂರಿ, ಸಿಪಿಎಂ ಪ್ರ.ಕಾರ್ಯದರ್ಶಿ
ಸಾರ್ವಜನಿಕ ಸಂಸ್ಥೆಗಳನ್ನೆಲ್ಲ ಖಾಸಗೀಕರಣ ಮಾಡಿದ್ದೇನಲ್ಲ, ಎಂದರಂತೆ ಮೋದಿ.


ಸಿಎಂ ಯಡಿಯೂರಪ್ಪರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಹಾಗಾಗಿ ಅವರ ಪಕ್ಕದಲ್ಲಿರುವವರು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ತಪ್ಪು ದಾರಿ ಹೇಳುತ್ತಿದ್ದಾರೆ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮೋದಿಯವರಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿಲ್ಲವಂತೆ, ಅಲ್ಲಿಗೆ ಸರಿಯಾಯಿತು.


ಕೊರೋನ ಹರಡುವುದನ್ನು ನಿಯಂತ್ರಿಸಲು ಜನರು ಆದಷ್ಟು ಮದುವೆ, ಬೀಗರ ಕೂಟ, ಬಾಡೂಟಗಳಿಂದ ದೂರ ಇರಬೇಕು -ಆರ್.ಅಶೋಕ್, ಸಚಿವ
ಕೂಟ, ಬಾಡೂಟಗಳನ್ನೆಲ್ಲ ಚುನಾವಣಾ ರ್ಯಾಲಿಗಳಿಗಷ್ಟೇ ಸೀಮಿತವೇ?


ಕೊರೋನ ಎನ್ನುವುದು ಒಂಥರ ಕರೆಂಟು ಹೊಡೆದಷ್ಟು ಭಯ ಹುಟ್ಟಿಸಿದೆ -ಎಚ್.ಡಿ.ರೇವಣ್ಣ, ಮಾಜಿ ಸಚಿವ
ಆದರೆ ಕರೆಂಟ್ ಬಿಲ್ಲಿಗಿಂತ ಕೊರೋನ ಬಿಲ್ಲು ದುಬಾರಿಯಾಗಿದೆ.


ದೇಶದಿಂದ ಕೊರೋನವನ್ನು ಹೋಗಲಾಡಿಸಲು ಎಲ್ಲರೂ ರಾಜಕೀಯ ಮೀರಿ ಕೆಲಸ ಮಾಡಬೇಕು -ಬಸವರಾಜ್ ಬೊಮ್ಮಾಯಿ, ಸಚಿವ
ಅವರು ಕೊರೋನ ಉಳಿಸಲು ರಾಜಕೀಯ ರ್ಯಾಲಿ ಹಮ್ಮಿಕೊಂಡಿದ್ದಾರೆ.


ಜಗತ್ತಿನ ಯಾವ ಮೂಲೆಗೆ ಹೋದರೂ ಅಲ್ಲಿ ನಮ್ಮ ಸಂಸ್ಕೃತಿ ಇರುತ್ತದೆ -ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಹೊಡಿ, ಬಡಿ, ಕೊಲ್ಲು ಸಂಸ್ಕೃತಿಯ ಬಗ್ಗೆ ಹೇಳುತ್ತಿರಬೇಕು.


ಪ.ಬಂ.ದಲ್ಲಿ ಸೋಲುವ ಭಯದಿಂದಲೇ ರಾಹುಲ್ ಗಾಂಧಿ ಪ್ರಚಾರ ಸಭೆಗಳನ್ನು ರದ್ದು ಪಡಿಸಿದ್ದಾರೆ -ರವಿಶಂಕರ್ ಪ್ರಸಾದ್, ಗೃಹ ಸಚಿವ
ಕೊರೋನ ಭಾರತವನ್ನು ಸೋಲಿಸುವ ಬದಲು ಚುನಾವಣೆಯಲ್ಲಿ ಸೋಲುವುದು ವಾಸಿ ಎಂದು ಭಾವಿಸಿರಬೇಕು.


ಕೋವಿಡ್ ಸೋಂಕು ಹೆಚ್ಚಾಗಲು ಜನರ ಉದಾಸೀನ ಕಾರಣ -ಡಾ.ಸುಧಾಕರ್, ಸಚಿವ
ಸರಕಾರದ ಉದಾಸೀನದ ಬಗ್ಗೆ ಮೊದಲು ಮಾತನಾಡಿ.

ಕೊರೋನ ಸೋಂಕು ತಡೆಗೆ ಲಾಕ್‌ಡೌನ್ ಕೊನೆಯ ಅಸ್ತ್ರ -ನರೇಂದ್ರ ಮೋದಿ, ಪ್ರಧಾನಿ
ಸೋಂಕು ತಡೆಗೆ ಲಾಕ್‌ಡೌನ್ ಬಿಟ್ಟು ಬೇರೆ ಯಾವ ಅಸ್ತ್ರ ನಿಮ್ಮ ಬಳಿ ಇದೆ ಎನ್ನುವುದನ್ನು ಮೊದಲು ಹೇಳಿ.


ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಪ್ರತಿಪಕ್ಷ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು -ಬಸವರಾಜ್ ಬೊಮ್ಮಾಯಿ, ಸಚಿವ
ಮಂಕಿ ಬಾತ್ ಈಗ ಬಿಸಿ ಬೇಳೆ ಬಾತ್ ಆಗಿ ಗಂಟಲಲ್ಲಿ ಇಳಿಯುತ್ತಿಲ್ಲ.


ಸಿದ್ದರಾಮಯ್ಯ ನಂತಹವರು ಕೂಡಾ ಮುಖ್ಯ ಮಂತ್ರಿಯಾಗಿದ್ದರಲ್ಲ ಎಂಬ ನೋವು ನನ್ನನ್ನು ಕಾಡುತ್ತದೆ -ಕೆ.ಎಸ್.ಈಶ್ವರಪ್ಪ, ಸಚಿವ
ಹೌದು, ಈಗ ಆಗಿಲ್ಲವಲ್ಲ ಎನ್ನುವ ಜನರ ನೋವು ಅದು.


ಆರ್ಥಿಕ ಬೆಳವಣಿಗೆ ಕಾಯ್ದಿರಿಕೊಳ್ಳಬೇಕೆಂದರೆ ಉದ್ಯಮ ಹಾಗೂ ಸರಕಾರದ ನಡುವೆ ಸಂಪೂರ್ಣ ವಿಶ್ವಾಸ ಇರಬೇಕು -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ದೇಶದಲ್ಲೀಗ ಉದ್ಯಮಗಳೂ ಇಲ್ಲ, ಸರಕಾರವೂ ಇಲ್ಲ. ಅದಾನಿ ಮತ್ತು ಅಂಬಾನಿಯಷ್ಟೇ ಉಳಿದುಕೊಂಡಿದ್ದಾರೆ.


ರಾಮಾಯಣಕ್ಕೆ ವಾಲ್ಮೀಕಿ ರಾಮಾಯಣವೇ ಆಧಾರ ಗ್ರಂಥ -ರಾಘವೇಶ್ವರ ಸ್ವಾಮೀಜಿ, ರಾಮ ಚಂದ್ರಾಪುರ ಮಠ
ನಿಮ್ಮ ಅಶ್ಲೀಲ ಸಂಬಂಧಕ್ಕೆ ರಾವಣನೇ ಆಧಾರ ಎಂದು ಯಾರೋ ಆರೋಪಿಸುತ್ತಿದ್ದಾರೆ.


ಉಪ ಚುನಾವಣೆಯೇ ಬೇರೆ, ಕೊರೋನ 2ನೇ ಅಲೆಯ ವಿಚಾರವೇ ಬೇರೆ -ಬಿ.ಎ.ಬಸವರಾಜ ಭೈರತಿ, ಸಚಿವ
ಮೋದಿಯ ಅಲೆ, ಕೊರೋನ ಅಲೆಯಾಗಿ ಮಾರ್ಪಟ್ಟಿದೆ.


ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಹುಟ್ಟುವ 3ನೇ ಮಗುವಿಗೆ ದಂಡ ಹಾಕಿ ಇಲ್ಲವೇ ಜೈಲಿಗೆ ಕಳುಹಿಸಿ -ಕಂಗನಾ ರಣಾವತ್, ನಟಿ
ತಮ್ಮ ಪಾಲಕರ ಕುರಿತಂತೆ ಈ ಪರಿಯ ಸಿಟ್ಟೆ?


ವ್ಯವಸ್ಥೆಯಲ್ಲಿ ಬೇರೂರಿರುವ ಜನಾಂಗೀಯ ತಾರತಮ್ಯವು ನಮ್ಮ ದೇಶದ ಆತ್ಮಕ್ಕೆ ಅಂಟಿರುವ ಕಳಂಕ-ಜೋ ಭೈೆಡನ್, ಅಮೆರಿಕ ಅಧ್ಯಕ್ಷ
ಭಾರತದಲ್ಲ್ಲಿ ಅದನ್ನು ಸಂಸ್ಕೃತಿ ಎಂದು ಕರೆಯುತ್ತಾರೆ.


ಕೋವಿಡ್-19 ಕೊನೆಗೊಂಡ ನಂತರ ನಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ಮುಖ್ಯವಾಗಲಿದೆ -ನರೇಂದ್ರ ಮೋದಿ, ಪ್ರಧಾನಿ
ಹೌದು ನಿಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದು ನಿಮಗೆ ಕಷ್ಟವಾಗಲಿದೆ.


ಕೊರೋನದಿಂದ ಇಷ್ಟೊಂದು ಸಾವುಗಳು ಸಂಭವಿಸುತ್ತಿದ್ದರೂ ಜನರು ಇನ್ನೂ ಅಸಡ್ಡೆ ಮಾಡುತ್ತಿದ್ದಾರೆ -ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಜನರಲ್ಲ, ಸರಕಾರ ಅಸಡ್ಡೆ ಮಾಡುತ್ತಿರುವುದು.


ಕಸಾಪ ಚುನಾವಣೆಯಲ್ಲಿ ಸರಕಾರ ಮೂಗು ತೂರಿಸುವುದಿಲ್ಲ -ಅರವಿಂದ ಲಿಂಬಾವಳಿ, ಸಚಿವ
ಬೇರೇನು ತೂರಿಸುತ್ತೀರಿ, ಅದನ್ನು ಹೇಳಿ.


ಜನರ ಜೀವ ರಕ್ಷಿಸಲು ವೀಕೆಂಡ್ ಕರ್ಫ್ಯೂ ಮಾಡಲಾಗಿದೆ -ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

ಜೀವ ರಕ್ಷಿಸಲು ಬೇಕಾಗಿರುವುದು ಆಕ್ಸಿಜನ್ ಅಲ್ಲವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...