ಭಿಕ್ಷಾಟನೆಯಲ್ಲಿ ತೊಡಗಿರುವ 27 ಮಕ್ಕಳು ಮಾಫಿಯಾ ನಿಯಂತ್ರಣದಲ್ಲಿ: ಎಸ್ಐಟಿ ರಚಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಎ.26: ರಾಜ್ಯದಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ವಿಚಾರ ಗಂಭೀರ ಸ್ವರೂಪದಾಗಿದ್ದು, ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಲು ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಬೆಂಗಳೂರು ನಗರದಲ್ಲಿ ರಸ್ತೆ ಬದಿ ಆಟಿಕೆ, ಹೂ ಮಾರಾಟ ಮಾಡಲು ಹಾಗೂ ಭಿಕ್ಷಾಟನೆ ಮಾಡಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇವರಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 27 ಮಕ್ಕಳನ್ನು ಮಾಫಿಯಾ ನಿಯಂತ್ರಣ ಮಾಡುತ್ತಿರುವ ಗುಮಾನಿ ಇದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇತ್ತೀಚೆಗೆ ಹೈಕೋರ್ಟ್ಗೆ ವರದಿ ಮಾಡಿತ್ತು. ವರದಿಯಲ್ಲಿ ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದೂ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಅಲ್ಲದೇ, ನಗರದಲ್ಲಿ ನೋಂದಣಿ ಮಾಡಿಸದೇ ಅಕ್ರಮವಾಗಿ ನಡೆಸುತ್ತಿರುವ ಮಕ್ಕಳ ಆರೈಕೆ ಕೇಂದ್ರಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ. ನಗರದಲ್ಲಿ 56ಕ್ಕೂ ಹೆಚ್ಚು ಅನಧಿಕೃತ ಮಕ್ಕಳ ಆರೈಕೆ ಕೇಂದ್ರಗಳಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ವಿಜಯನಗರದಲ್ಲಿ ನಡೆಸುತ್ತಿರುವ ಕೇಂದ್ರವೂ ಅನಧಿಕೃತವಾಗಿದೆ. ಇಂಥ ಆರೈಕೆ ಕೇಂದ್ರಗಳಲ್ಲಿ ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಆರೋಪಗಳಿವೆ ಎಂಬ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಿದೆ.
ನಗರದ ರಸ್ತೆ ಬದಿ ಹಾಗೂ ಸಿಗ್ನಲ್ಗಳಲ್ಲಿ ಆಟಿಕೆ, ಹೂ ಮಾರಾಟ ಮಾಡುವ ಹಾಗೂ ಭಿಕ್ಷೆ ಬೇಡುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಇಂಥ ಮಕ್ಕಳನ್ನು ಸರ್ವೆ ಮಾಡಿ ಗುರುತಿಸಿ ವರದಿ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು. ಅದರಂತೆ ವರದಿ ನೀಡಿದ್ದ ಕೆಎಸ್ಎಲ್ಎಸ್ಎ ನಗರದ 432 ಸ್ಥಳಗಳಲ್ಲಿ 720 ಮಕ್ಕಳು ಆಟಿಕೆ ಮಾರಾಟ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 27 ಮಕ್ಕಳನ್ನು ಮಾಫಿಯಾ ನಿಯಂತ್ರಿಸುತ್ತಿರುವ ಗುಮಾನಿ ಇದೆ ಎಂದು ಶಂಕೆ ವ್ಯಕ್ತಪಡಿಸಿತ್ತಲ್ಲದೇ, ಈ ಸಂಬಂಧ ತನಿಖೆ ನಡೆಸುವ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು.