ಸಿರಗುಪ್ಪ ಬಳಿ ರಸ್ತೆ ಅಪಘಾತ: ತಂದೆ-ಮಗ ಸಹಿತ ನಾಲ್ವರು ಮೃತ್ಯು

Update: 2021-04-28 05:27 GMT

ಬಳ್ಳಾರಿ, ಎ.28: ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ತಂದೆ-ಮಗನ ಸಹಿತ ನಾಲ್ವರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ಸಂಭವಿಸಿರುವುದು ವರದಿಯಾಗಿದೆ.

ಮೃತರನ್ನು ಬಳ್ಳಾರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿದ್ದ ಬಸವರಾಜ ಭೀಮರಾವ ಬೆಳ್ಳೂರು(52), ಅವರ ಪುತ್ರ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಭೀಮರಾವ ಬೆಳ್ಳೂರು (30), ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಸುನೀಲ್ ಶಿವರಾಜ ಪಾಟೀಲ‌(30) ಹಾಗೂ ಕಾರು ಚಾಲಕ ಕೊರಡಂಪಳ್ಳಿಯ ರೇವಣಸಿದ್ದ ಬಸವರಾಜ(30) ಎಂದು ಗುರುತಿಸಲಾಗಿದೆ. ಮೃತರು ಚಿಂಚೋಳಿ ತಾಲೂಕಿನ ಚಿಮ್ಮಾಈದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದವರಾಗಿದ್ದಾರೆ.

ಸರಕಾರ ಕಠಿಣ ಕೋವಿಡ್ ಕರ್ಫ್ಯೂ ಜಾರಿ ಮಾಡಿದ್ದರಿಂದ ಇವರು ಬೆಂಗಳೂರಿನಿಂದ ಕಾರಿನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದರೆನ್ನಲಾಗಿದೆ. ಇವರಿದ್ದ ಕಾರು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ತಲುಪಿದಾಗ ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ನಾಲ್ವರು ಕೂಡಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News