ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ತಂದೆ-ತಾಯಿ ಕೋವಿಡ್‍ ನಿಂದ ಮೃತ್ಯು

Update: 2021-04-30 15:17 GMT

ಬೆಂಗಳೂರು, ಎ.30: ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ಅವರ ತಂದೆ ಮತ್ತು ತಾಯಿ ಇಬ್ಬರು ಕೋವಿಡ್ ಸೋಂಕಿನಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೂರು ದಿನಗಳ ಅಂತರದಲ್ಲಿ ಇಬ್ಬರೂ ಅಸುನೀಗಿದ್ದಾರೆ.

ತಾಯಿ ಕಸ್ತೂರಮ್ಮ ಬಡಿಗೇರ್(53) ಹಾಗೂ ತಂದೆ ಚಂದ್ರಶೇಖರ್ ಬಡಿಗೇರ್(68) ಎಂದು ಗುರುತಿಸಲಾಗಿದೆ. ಅರುಣ್ ಬಡಿಗೇರ್ ಅವರ ಸಹೋದರಿಯ ವಿವಾಹ ನಿಶ್ಚಿತವಾಗಿದ್ದು, ಮದುವೆ ಆಹ್ವಾನ ಪತ್ರಿಕೆ ಹಂಚುವ ಸಂದರ್ಭದಲ್ಲಿ ತಂದೆ ಮತ್ತು ತಾಯಿ ಇಬ್ಬರಿಗೂ ಸೋಂಕು ತಗಲಿದ್ದು, ಜ್ವರ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾದಾಗ ಸೋಂಕು ದೃಢಪಟ್ಟಿತ್ತು ಎಂದು ಗೊತ್ತಾಗಿದೆ.

ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎ.27ಕ್ಕೆ ಬಡಿಗೇರ್ ಅವರ ತಾಯಿ ಕಸ್ತೂರಮ್ಮ ಹಾಗೂ ಎ.30ಕ್ಕೆ ತಂದೆ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ.

ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ದಂಪತಿ ಅಗಲಿದ್ದಾರೆ. ಅರುಣ್ ಅವರ ತಂದೆ ಚಂದ್ರಶೇಖರ್ ನಿವೃತ್ತ ಶಿಕ್ಷಕರಾಗಿದ್ದು ಧಾರವಾಡದ ರೈಟರ್ ಗಲ್ಲಿಯಲ್ಲಿ ವಾಸವಾಗಿದ್ದರು. ಅರುಣ್ ಸಹೋದರ ಮತ್ತು ಸಹೋದರಿಗೂ ಕೋವಿಡ್ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News