×
Ad

ಸಚಿವರೇ ಕಮಿಷನ್ ತಿಂದಿದ್ದು ಸಾಕು, ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿಸಿ: ಡಿ.ಕೆ.ಶಿವಕುಮಾರ್

Update: 2021-04-30 22:31 IST

ಬೆಂಗಳೂರು, ಎ.30: ಸಚಿವರೆ ಕಮಿಷನ್ ಲೆಕ್ಕ ಹಾಕಿಕೊಂಡು ಕೂತಿದ್ದೀರಾ? ಕಮಿಷನ್ ಹೊಡೆದಿದ್ದು ಸಾಕು. ಹಿಂದೆ ತಿಂದಿದ್ದು ಸಾಕು, ಮುಂದೆ ತಿನ್ನೋದು ಸಾಕು. ಆದಷ್ಟು ಬೇಗ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿಸಿ. ಜನರ ಕಷ್ಟದ ಬಗ್ಗೆ ಗಮನ ಹರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು 18 ರಿಂದ 45 ವರ್ಷದವರು ಕೊರೋನ ಲಸಿಕೆ ಹಾಕಿಸಿಕೊಳ್ಳಲು ಆನ್ ಲೈನ್ ನೋಂದಣಿಗೆ ಸೂಚಿಸಿದೆ. ಸರಕಾರ ದೇಶದ ಎಲ್ಲ ವರ್ಗದ ಬಗ್ಗೆ ಯೋಚಿಸುತ್ತಿದೆಯೋ ಅಥವಾ ಒಂದು ವರ್ಗದ ಬಗ್ಗೆ ಮಾತ್ರ ಯೋಚಿಸುತ್ತಿದೆಯೇ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ನಾನು ಆನ್‍ಲೈನ್ ನೋಂದಣಿ ಮಾಡಿಸಬೇಕು ಎಂದರೆ ಬೇರೆಯವರ ಸಹಾಯ ಪಡೆಯಬೇಕಾಗುತ್ತದೆ. ಇನ್ನು ಹಳ್ಳಿ ಜನರ ಪರಿಸ್ಥಿತಿ ಏನು? ಅವರಿಗೆ ಆನ್‍ಲೈನ್ ಸೌಲಭ್ಯ ಇದೆಯೇ? ಆನ್‍ಲೈನ್ ನೋಂದಣಿ ಮಾಡಿದವರಿಗೆ ಮಾತ್ರ ಹಾಕುವ ಯೋಚನೆಯೋ? ಈ ಹಿಂದೆ ಮನೆ ಬಾಗಿಲಿಗೆ ಹೋಗಿ ಪೊಲೀಯೋ ಲಸಿಕೆ ಹಾಕಿದಂತೆ ಈಗ ಕೊರೋನ ಲಸಿಕೆಯನ್ನೂ ನೀಡಬೇಕು ಎಂಬುದು ಕಾಂಗ್ರೆಸ್ ಆಗ್ರಹ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಾಳೆಯಿಂದ ಲಸಿಕೆ ನೀಡಲು ಸಾಧ್ಯವಿಲ್ಲ, ವಿಳಂಬವಾಗುತ್ತದೆ ಎಂದು ಸರಕಾರವೇ ಹೇಳುತ್ತಿದೆ. ಕೊರೋನ ಬಂದು ವರ್ಷವಾಗಿದೆ. ಆದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೇ, ಸರಕಾರ ಜನರನ್ನು ಸಂಕಟಕ್ಕೆ ತಳ್ಳುತ್ತಿದೆ. ಬರೀ ಸುಳ್ಳು ಹೇಳಿ ತನ್ನ ಹುಳುಕು ಮುಚ್ಚಿಕೊಳ್ಳುತ್ತಿದೆ ಎಂದು ಶಿವಕುಮಾರ್ ಟೀಕಿಸಿದರು.

ನನ್ನ ಕ್ಷೇತ್ರದಲ್ಲೇ 17 ಜನ ಸತ್ತಿದ್ದರೂ 4 ಜನ ಸತ್ತಿದ್ದಾರೆ ಎಂದು ಸುಳ್ಳು ಅಂಕಿ-ಅಂಶ ತೋರಿಸುತ್ತಿದೆ. ವಾಸ್ತವದ ಶೇ.20 ರಷ್ಟನ್ನು ಅಂಕಿ-ಅಂಶದಲ್ಲಿ ತೋರಿಸುತ್ತಿಲ್ಲ. ಸರಕಾರ ಕೊರೋನ ಸಾವಿನ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಬೇಕು. ಸತ್ತವರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ, ಸಾವಿಗೆ ಕಾರಣ ತಿಳಿಯಬೇಕು. ಕಾಂಗ್ರೆಸ್ ಕಾರ್ಯಕರ್ತರು ಕೊರೋನ ಸಾವಿನ ವಾಸ್ತವಾಂಶವನ್ನು ಕೆಪಿಸಿಸಿ ಕಚೇರಿಗೆ ರವಾನಿಸಬೇಕು ಎಂದು ಅವರು ಸೂಚಿಸಿದರು.

ಲಸಿಕೆ ವಿಚಾರದಲ್ಲಿ ಸರಕಾರ ತಯಾರಿ ಮಾಡಿಕೊಳ್ಳದಿದ್ದರೂ ಲಸಿಕೆ ಅಭಿಯಾನ ಘೋಷಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಅಂತರ್‍ರಾಷ್ಟ್ರೀಯ ಮಾಧ್ಯಮಗಳು ಭಾರತದಲ್ಲಿ ಸರಕಾರ ಕೊರೋನ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿವರವಾಗಿ ವರದಿ ಮಾಡುತ್ತಿವೆ ಎಂದು ಶಿವಕುಮಾರ್ ಹೇಳಿದರು.

ನಾನು ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರಕ್ಕೆ ಒಂದು ವಿಚಾರ ಕೇಳುತ್ತೇನೆ. ಈ ಪರಿಸ್ಥಿತಿ ನಿಯಂತ್ರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಾಗಿದೆ. ಆದರೂ ಯಾಕೆ ಸುಳ್ಳುಗಳನ್ನು ಹೇಳುತ್ತಿದ್ದೀರಿ. ಲಾಕ್‍ಡೌನ್ ಹೇರಿರುವ ಹಿನ್ನೆಲೆಯಲ್ಲಿ ಸರಕಾರವು ಜನರಿಗೆ ಆರ್ಥಿಕ ನೆರವು ನೀಡಬೇಕು. ಈಗಾಗಲೇ ಜನ ವಲಸೆ ಹೋಗುತ್ತಿದ್ದಾರೆ. ಕಾರ್ಮಿಕರು ಗುಳೆ ಹೋಗುವುದನ್ನು ನಿಲ್ಲಿಸಲು ಆರ್ಥಿಕ ಪ್ಯಾಕೇಜ್ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.

ಕಳೆದ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ಹಾಸಿಗೆ ಪಡೆದಿತ್ತು. ಈ ವರ್ಷವೂ ಶೇ.80ರಷ್ಟು ಪಡೆದಿದೆ. ಆದರೆ ಅವರಿಗೆ ಕಳೆದ ವರ್ಷದ ಬಾಕಿಯನ್ನೇ ಕೊಟ್ಟಿಲ್ಲ. ಈ ಆಸ್ಪತ್ರೆಗಳಲ್ಲಿ ನರ್ಸ್ ಗಳಿಗೆ ಕೊಡಲು, ಔಷದಿ, ಆಕ್ಸಿಜನ್ ಖರೀದಿಗೆ ದುಡ್ಡಿಲ್ಲದಂತಾಗಿದೆ. ರೆಮ್‍ಡೆಸಿವಿರ್ ಪೂರೈಸುತ್ತಿರುವ ಡ್ರಗ್ ಕಂಟ್ರೋಲರ್ ಗಳ ಫೋನ್ ಆಫ್ ಆಗಿವೆ ಎಂದು ಅವರು ಹೇಳಿದರು.

ನೀವು ಕೆಲವು ಸರಕಾರಿ ಆಸ್ಪತ್ರೆಗಳಿಗೆ ಮಾತ್ರ ಇವುಗಳನ್ನು ಪೂರೈಸುತ್ತಿದ್ದೀರಿ ಹೊರತು, ಬೇರೆ ಯಾರಿಗೂ ಕೊಡುತ್ತಿಲ್ಲ. ನಮಗೆ ರೆಮ್‍ಡಿಸಿವಿರ್ ಬೇಕು ಎಂದು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಆಸ್ಪತ್ರೆಗಳಿಗೂ ಇದನ್ನು ಪೂರೈಸಬೇಕು. ಕೂಡಲೇ ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಬೇಕು. ಯಾರಿಗೆ ಹಣ ಕೊಟ್ಟಿದ್ದೀರಿ ಎಂಬುದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿ ಎಂದು ಶಿವಕುಮಾರ್, ಸರಕಾರವನ್ನು ಆಗ್ರಹಿಸಿದರು.

ಸೋಂಕಿತರಿಗೆ ನಮ್ಮಿಂದಾದ ನೆರವು ನೀಡುತ್ತಿದ್ದೇವೆ: ಕಾಂಗ್ರೆಸ್ ಪಕ್ಷದಿಂದ 10 ಆ್ಯಂಬುಲೆನ್ಸ್ ಗಳನ್ನು ಸಿದ್ಧಪಡಿಸಲಾಗಿದೆ. ಮಾಜಿ ಮೇಯರ್ ಗಳು, ಕಾರ್ಯಾಧ್ಯಕ್ಷರ ಜತೆ ಸಭೆ ನಡೆಸಿದ್ದೇನೆ. ನಾವು ಸೋಂಕಿತರಿಗೆ, ಸತ್ತವರ ಕುಟುಂಬಕ್ಕೆ ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.

ಸರಕಾರವು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಯಾರೂ ಅದನ್ನು ಸ್ವೀಕರಿಸುತ್ತಿಲ್ಲ. ನಮ್ಮ ಸಹಾಯವಾಣಿಗೆ 3 ಸಾವಿರಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದಾರೆ. 100 ಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ನೆರವಾಗಿದ್ದಾರೆ. 300ಕ್ಕೂ ಹೆಚ್ಚು ಸೋಂಕಿತರಿಗೆ ವೈದ್ಯರಿಂದ ಮಾರ್ಗದರ್ಶನ ಕೊಡಿಸಿ, ಔಷಧಿಗಳನ್ನು ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ಸಹಾಯವಾಣಿ ಆರಂಭಿಸಲು ಸೂಚಿಸಿದ್ದೇವೆ. ಈ ಸಮಯದಲ್ಲಿ ಎಷ್ಟೇ ಕಷ್ಟವಾದರೂ ಜನರ ಜತೆ ಇರಬೇಕು ಎಂದು ಕೆಲಸ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಮತದಾರ ಬದಲಾವಣೆ ಬಯಸಿದ್ದಾನೆ: ಪಕ್ಷದ ಚಿಹ್ನೆಗಳ ಮೇಲೆ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 10 ಸಂಸ್ಥೆಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಜನರ ಆಶೀರ್ವಾದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ರಾಮನಗರದಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಒಬ್ಬ ಹೆಣ್ಣುಮಗಳು ಕೆಲ ದಿನಗಳ ಹಿಂದೆ ಕೊರೋನದಿಂದ ಮೃತಪಟ್ಟಿದ್ದು, ಚುನಾವಣೆಯಲ್ಲಿ ಆಕೆ ಗೆದ್ದಿದ್ದಾಳೆ. ಉಳಿದಂತೆ ರಾಮನಗರ, ಗುಡಿಬಂಡೆ, ಭದ್ರಾವತಿ, ತೀರ್ಥಹಳ್ಳಿ, ಬೇಲೂರು, ಬೀದರ್, ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರದ ದುರಾಡಳಿತವನ್ನು ಜನ ತಿರಸ್ಕರಿಸುತ್ತಿರುವುದಕ್ಕೆ ಈ ಚುನಾವಣೆ ಫಲಿತಾಂಶವೇ ಸಾಕ್ಷಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ನಮ್ಮ ಪಕ್ಷ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿತ್ತು. ಆದರೆ ಆಗ ಪಕ್ಷದ ಚಿಹ್ನೆ ಇಲ್ಲ ಎಂದು ಕೆಲವರು ಮಾತನಾಡಿದ್ದರು. ಈ ಸ್ಥಳೀಯ ಸಂಸ್ಥೆ ಚುನಾವಣೆ ಪಕ್ಷದ ಚಿಹ್ನೆ ಆಧಾರದ ಮೇಲೆ ನಡೆದಿದ್ದು, 266 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 119, ಬಿಜೆಪಿ 56, ಜೆಡಿಎಸ್ 67 ಹಾಗೂ 14 ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ 14ರಲ್ಲಿ 11 ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್‍ಗೆ ಮತ ನೀಡಿರುವ ಎಲ್ಲ ಮತದಾರರಿಗೆ, ಕಾರ್ಯಕರ್ತರು, ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News