ಕಾರ್ಪೊರೇಟ್ ಧಣಿಗಳ ಕೈಗೆ ದೇಶ ಒಪ್ಪಿಸಿರುವ ಮೋದಿಯೇ ದೇಶದ ಎಲ್ಲಾ ಸಮಸ್ಯೆಗೆ ಕಾರಣ: ಸಿದ್ದರಾಮಯ್ಯ

Update: 2021-05-01 12:23 GMT

ಬೆಂಗಳೂರು, ಮೇ 1: ಕೋವಿಡ್‍ನ ಎರಡನೇ ಅಲೆ ರಾಜ್ಯ ಮತ್ತು ರಾಷ್ಟ್ರಗಳನ್ನು ತೀವ್ರವಾಗಿ ಬಾಧಿಸುತ್ತಿದೆ. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು, ಸೋಂಕು ಹರಡದಂತೆ ನೋಡಿಕೊಳ್ಳಲು ಜನರಿಗೆ ವ್ಯಾಪಕವಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಂದೋಲನದ ರೀತಿ ಹಮ್ಮಿಕೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದರೆ. 

ಈ ಸಂಬಂಧ ಕೆಲ ಸಲಹೆಗಳನ್ನು ನೀಡಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ವಿವಿಧ ಮೂಲಗಳಲ್ಲಿ ದುಡಿಮೆ ಮಾಡಿ ಕುಟುಂಬಗಳನ್ನು ನಿರ್ವಹಿಸುತ್ತಿರುವ ಯುವ ಸಮುದಾಯ ಕೋವಿಡ್‍ಗೆ ತುತ್ತಾಗುತ್ತಿರುವುದರಿಂದ ಅಸಂಖ್ಯಾತ ಕುಟುಂಬಗಳ ಮನೆಯ ದೀಪ ಆರಿ ಹೋಗುತ್ತಿದೆ. ಆದ್ದರಿಂದ ಅತ್ಯಂತ ತುರ್ತಾಗಿ ಯುವ ಸಮುದಾಯಕ್ಕೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು. 

ರಾಜ್ಯದಲ್ಲಿ ಶೇ. 70ಕ್ಕಿಂತ ಹೆಚ್ಚು ಮಂದಿ ಬಡವರು ಮತ್ತು ದುಡಿಯುವ ವರ್ಗಗಳ ಜನರಿದ್ದಾರೆ. ಇದರಲ್ಲಿ ಬಹುಪಾಲು ಮಂದಿಗೆ ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಲು ಅನೇಕ ಕಾರಣಗಳಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಈಗ ಅನುಸರಿಸುತ್ತಿರುವ ವ್ಯವಸ್ಥೆಯಂತೆ ಸ್ಥಳದಲ್ಲಿಯೇ ನೋಂದಾಯಿಸಿ ಲಸಿಕೆ ನೀಡಬೇಕು. ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಂದೋಲನದ ರೀತಿ ನಡೆಯಬೇಕು ಎಂದು ತಿಳಿಸಿದ್ದಾರೆ. 

ಲಸಿಕೆ ಲಭ್ಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಕೇವಲ 65 ಕೋಟಿ ರೂ.ಗಳನ್ನು ನೀಡಿ ಕೋವ್ಯಾಕ್ಸಿನ್ ಲಸಿಕೆಯನ್ನು ತನ್ನದೇ ಸಾರ್ವಜನಿಕ ಸಂಸ್ಥೆಗಳ ಮೂಲಕ ಉತ್ಪಾದನೆ ಮಾಡಿ ಜನರಿಗೆ ನೀಡಲು ಕಾರ್ಯೋನ್ಮುಖವಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಲಸಿಕೆ ಉತ್ಪಾದನೆ ಮಾಡಿ 18 ವರ್ಷ ತುಂಬಿದವರಿಗೆ ಉಚಿತವಾಗಿ ನೀಡಬೇಕು.

ಕೋವ್ಯಾಕ್ಸಿನ್ ಲಸಿಕೆಯ ಪೇಟೆಂಟ್ ಕೂಡ ಭಾರತ ಸರ್ಕಾರದ ಐಸಿಎಂಆರ್ ನಿಯಂತ್ರಣದಲ್ಲಿರುವ ವೈರಾಲಜಿ ಇನ್ಸ್‍ಟಿಟ್ಯೂಟ್‍ನವರ ಕೈಯ್ಯಲ್ಲಿದೆ. ಹೀಗಾಗಿ ಸದರಿ ಸಂಸ್ಥೆಯು ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಪ್ರೋಟೋಕಾಲ್‍ನ್ನು ಇತರೆ ಕಂಪನಿಗಳಿಗೆ ನೀಡಿ, ಅಗತ್ಯ ಪ್ರಮಾಣದ ಪರೀಕ್ಷೆ ನಡೆಸಿ, ಉತ್ಪಾದನೆಗೆ ಅವಕಾಶ ನೀಡಿ ದೇಶದ ಎಲ್ಲ ಜನರಿಗೆ ಉಚಿತವಾಗಿ ಲಸಿಕೆ ನೀಡಬೇಕು. ಇದಕ್ಕಾಗಿ ರಾಜ್ಯದ ಸಂಸದರು, ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳು ತಮ್ಮ ಕೆಟ್ಟ ಮೌನ ಬಿಟ್ಟು ಪ್ರಧಾನಿಯವರ ಮೇಲೆ ಒತ್ತಡ ಹೇರಬೇಕು. ಆ ಮೂಲಕ ರಾಜ್ಯವನ್ನು ಅತ್ಯಂತ ಶೀಘ್ರವಾಗಿ ಕೋವಿಡ್ ಮುಕ್ತ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ. 

ತಜ್ಞರ ಪ್ರಕಾರ ಲಸಿಕೆ ಪಡೆದವರಲ್ಲಿ ಸೋಂಕು ನಿರೋಧಕ ಶಕ್ತಿ ಬರುತ್ತದೆ. ಸೋಂಕು ನಿರೋಧ ಶಕ್ತಿ ಬಂದರೆ ಅವರಿಂದ ಇತರರಿಗೆ ಸೋಂಕು ಹರಡುವ ಪ್ರಮಾಣವೂ ಕಡಿಮೆಯಾಗುತ್ತದೆ. ಇದು ಸರಳ ಮತ್ತು ವೈಜ್ಞಾನಿಕವಾದ ತರ್ಕ. ಆದರೆ, ನಮ್ಮ ದೇಶದಲ್ಲಿ ಸರ್ಕಾರ ತನ್ನದೇ ಪ್ರಜೆಗಳಿಗೆ ಲಸಿಕೆ ಹಾಕುವ ಬದಲು ವಿದೇಶಗಳಿಗೆ ಲಸಿಕೆ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಖಾಸಗಿಯವರಿಗೆ ಎಷ್ಟು ಸಾಧ್ಯವೋ ಅಷ್ಟು ಹಣ ದೋಚಲು ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ಟೀಕಿಸಿದ್ದಾರೆ.

ಮಾತೆತ್ತಿದರೆ “ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ” ಎಂದು ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತವರ ಸಮರ್ಥಕರು ಕಾರ್ಪೊರೇಟ್ ದಣಿಗಳ ಕೈಗೆ ದೇಶವನ್ನು ಒಪ್ಪಿಸಿ ಜನರನ್ನು ಬೀದಿಬೀದಿಯಲ್ಲಿ ನರಳಿ ಸಾಯುವಂತೆ ಮಾಡಿದ್ದಾರೆ. ದೇಶದ ಇಂದಿನ ಎಲ್ಲ ಸಮಸ್ಯೆಗಳಿಗೆ ಕಾರ್ಪೊರೇಟ್ ಧಣಿಗಳ ಕೈಗೆ ದೇಶವನ್ನು ಒಪ್ಪಿಸಿರುವ ನರೇಂದ್ರ ಮೋದಿ ಮತ್ತವರ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಒಂದು ಡೋಸ್‍ಗೆ 250ರಿಂದ 350 ರೂ. ನಿಗದಿ ಮಾಡಿ ಅನ್ಯ ದೇಶಗಳಿಗೆ ಕೇಂದ್ರ ಸರ್ಕಾರದ ಮೂಗಿನಡಿ ಲಸಿಕೆ ರಫ್ತು ಮಾಡಿದ ಖಾಸಗಿ ಕಂಪನಿ ದೇಶದ ಜನರಿಗೆ ಲಸಿಕೆ ನೀಡಲು 600 ರೂ.ಗಳ ವರೆಗೆ ದರ ನಿಗದಿಪಡಿಸಿದೆ. ಅದನ್ನು ಕೇಂದ್ರ ಸರ್ಕಾರ ಅನುಮೋದಿಸುತ್ತದೆ ಎಂದರೆ ಕಾರ್ಪೊರೇಟ್ ಕಂಪನಿಗಳ ಓಲೈಕೆ ಯಾವ ಮಟ್ಟದ್ದು ಎಂಬುದು ಅರ್ಥವಾಗುತ್ತದೆ. ಕೂಲಿ ಕಾರ್ಮಿಕ ವರ್ಗ 1200 ರೂ. ನೀಡಿ ಲಸಿಕೆ ಹಾಕಿಸಿಕೊಳ್ಳುವುದು ಸಾಧ್ಯವೇ ? ಲಸಿಕೆ ನೀಡಲು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿದ್ದ 35 ಸಾವಿರ ಕೋಟಿ ರೂ. ಏನಾಯಿತು ? ಎಂದು ಅವರು ಪ್ರಶ್ನಿಸಿದ್ದಾರೆ.

ಅನೇಕ ರೋಗಗಳಿಗೆ ಆಂದೋಲನದ ರೂಪದಲ್ಲಿ ಲಸಿಕೆ ನೀಡುವುದರ ಮೂಲಕ ಸಿಡುಬು, ದಡಾರ, ಪೊಲಿಯೋ ಮುಂತಾದ ಕಾಯಿಲೆಗಳನ್ನು ಬುಡಸಮೇತ ನಿರ್ಮೂಲನೆ ಮಾಡಲು ಸಾಧ್ಯವಾಯಿತು. ಅಂತಹ ಉದಾತ್ತ ಜನಪರ ಆಡಳಿತ ಪರಂಪರೆಯನ್ನು ಮೋದಿಯವರ ಸರ್ಕಾರ ಮಣ್ಣುಪಾಲು ಮಾಡುತ್ತಿದೆ. 18 ವರ್ಷ ತುಂಬಿದವರಿಗೆ ಮೇ ಒಂದರಿಂದ ಲಸಿಕೆ ನೀಡುವುದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ್ದವು. ಲಸಿಕೆ ಬೇಕು ಎಂದವರು ಆನ್‍ಲೈನ್ ಮೂಲಕ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿತ್ತು. ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಸುಳ್ಳು ಹೇಳಿದ್ದ ಕೇಂದ್ರ, ರಾಜ್ಯ ಸರ್ಕಾರಗಳನ್ನು ಬೆಚ್ಚಿ ಬೀಳಿಸುವಂತೆ ಜನ ಈಗ ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ. 

ಯುವಜನರ ಉತ್ಸಾಹ ನೋಡಿ ಬೆಚ್ಚಿಬಿದ್ದ ಸರ್ಕಾಗಳು ಲಸಿಕೆ ಲಭ್ಯವಿಲ್ಲ ಎಂದು ಹೇಳಿ ಲಸಿಕೆ ನೀಡುವ ಕಾರ್ಯಕ್ರಮವನ್ನೇ ಮುಂದೂಡಿವೆ. ದೇಶದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಮತ್ತು ಮರಣ ಹೊಂದುತ್ತಿರುವ ಸೋಂಕಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಆಗಿರುವುದು ದೊಡ್ಡ ದುರಂತ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರ ಕಾರಣ ಎಂದು ಹೇಳದೇ ವಿಧಿಯಿಲ್ಲ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News