ಶಿವಮೊಗ್ಗ: ಕೊರೋನ ಸೋಂಕಿತರ ಆರೈಕೆ ಸರಿಯಾಗಿ ಮಾಡುತ್ತಿಲ್ಲ ಎಂದು ಆಸ್ಪತ್ರೆ ಮುಂಭಾಗ ಪ್ರತಿಭಟನೆ

Update: 2021-05-04 17:11 GMT

ಶಿವಮೊಗ್ಗ, ಮೇ 4: ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾಗಿ ಆರೈಕೆ ಸಿಗುತ್ತಿಲ್ಲ, ಔಷಧೋಪಚಾರವು ಸರಿಯಾಗಿಲ್ಲ ಎಂದು ಆರೋಪಿಸಿ ಕೊರೋನ ಸೋಂಕಿತರ ಸಂಬಂಧಿಗಳು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿ, ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರ ಆರೈಕೆಗೆ ಈವರೆಗೂ ಸಂಬಂಧಿಯೊಬ್ಬರನ್ನು ಬಿಡಲಾಗುತ್ತಿತ್ತು. ಪಿಪಿಇ ಕಿಟ್ ಧರಿಸಿಕೊಂಡು ಸಂಬಂಧಿಗಳು ವಾರ್ಡ್ ನ ಒಳಗೆ ಹೋಗಬಹುದಾಗಿದೆ. ಆದರೆ ಮಂಗಳವಾರ ಮಧ್ಯಾಹ್ನ ಸೋಂಕಿತರ ಜೊತೆಗಿದ್ದ ಸಂಬಂಧಿಗಳನ್ನು ದಿಢೀರನೆ ವಾರ್ಡಿನಿಂದ ಹೊರಗೆ ಕಳುಹಿಸಲಾಯಿತು. ಇದರಿಂದ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಸಂಬಂಧಿಗಳ ಆರೋಪ ಏನು?: ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾಗಿ ಆರೈಕೆ ಸಿಗುತ್ತಿಲ್ಲ. ಔಷಧೋಪಚಾರವು ಸರಿಯಾಗಿಲ್ಲ. ಮನೆಯವರೊಬ್ಬರು ಇದ್ದರೆ ಎಲ್ಲವು ಸರಿಯಾಗಿ ನಡೆಯಲಿದೆ. ಈಗ ಎಲ್ಲರನ್ನು ದಿಢೀರನೆ ಹೊರಗೆ ಕಳುಹಿಸಿ, ನಮ್ಮ ಜೀವಕ್ಕೆ ಕುತ್ತು ತರುವ ಪ್ರಯತ್ನ ನಡೆಯತ್ತಿದೆ ಎಂದು ಆರೋಪಿಸಿದರು.

ಎಮರ್ಜೆನ್ಸಿ ವಾರ್ಡ್ ಬಳಿಕ ಪ್ರತಿಭಟನೆ:

ರೋಗಿಗಳ ಸಂಬಂಧಿಗಳು ಎಮರ್ಜನ್ಸಿ ವಾರ್ಡ್ ಕಡೆ ಇರುವ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ತಮ್ಮನ್ನು ವಾರ್ಡ್ ಒಳಗೆ ಬಿಡಬೇಕು ಎಂದು ಆಗ್ರಹಿಸಿದರು. ವಿಚಾರ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರೋಗಿಗಳ ಸಂಬಂಧಿಗಳನ್ನು ಸಮಾಧಾನಪಡಿಸಿದರು. ಆದರೆ ಆಸ್ಪತ್ರೆ ಆಡಳಿತ ತಮ್ಮನ್ನು ಒಳಗೆ ಬಿಡಬೇಕು, ತಮ್ಮ ಸಂಬಂಧಿಗಳ ಜೀವಕ್ಕೆ ತೊಂದರೆಯಾದರೆ ಆಡಳಿತವೆ ಹೊಣೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News