ಕೊರೋನ ವೇಳೆಯೂ ಕೋಮುದ್ವೇಷ ಹರಡುತ್ತಿರುವವರ ವಿರುದ್ಧ ಕ್ರಮ ಜರುಗಿಸಿ: ಸಿಎಂಗೆ ಚಿಂತಕರ ಆಗ್ರಹ

Update: 2021-05-06 16:37 GMT

ಬೆಂಗಳೂರು, ಮೇ 6: ಕೋವಿಡ್ ಸಂದರ್ಭದಲ್ಲಿಯೂ ಕೋಮುದ್ವೇಷವನ್ನು ಹರಡುತ್ತಿರುವ ವ್ಯಕ್ತಿಗಳ ಬಗ್ಗೆ ಕ್ರಮ ಜರುಗಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಬೇಕೆಂದು ಚಿಂತಕರು ಒಕ್ಕೂರಲಿನಿಂದ ಆಗ್ರಹಿಸಿದರು.

ಗುರುವಾರ ವಿಡಿಯೊ ಸಂವಾದ ನಡೆಸಿದ ಚಿಂತಕರು, ಕೋವಿಡ್ ಸೋಂಕಿನ ಎರಡನೆ ಅಲೆಯಿಂದ ರಾಜ್ಯ ತತ್ತರಿಸುತ್ತಿದೆ. ದುರಾಡಳಿತದಿಂದ ರಾಜ್ಯದ ಹಲವು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಂತದಲ್ಲಿ ಜನರಿಗೆ ಆಮ್ಲಜನಕ, ಬೆಡ್, ಔಷಧಿಗಳ ಪೂರೈಕೆ ಮಾಡುವುದು ಜನ ಪ್ರತಿನಿಧಿಗಳ ಅಗತ್ಯ ಕರ್ತವ್ಯ. ಈ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದು ಬಿಟ್ಟು ರಾಜ್ಯದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಹಾಗೂ ಉದಯ ಗರುಡಾಚಾರ್ ಸೇರಿಕೊಂಡು ಅನಗತ್ಯ ಕೋಮುವಾದೀಕರಣ ಮಾಡುತ್ತಿರುವುದು ಬೇಸರದ ಸಂಗತಿ. ಈ ಕುರಿತು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಆರಂಭದಲ್ಲಿ ಮಾತನಾಡಿದ ಇತಿಹಾಸ ತಜ್ಞ, ಚಿಂತಕ ರಾಮಚಂದ್ರ ಗುಹಾ ಅವರು ತೇಜಸ್ವಿ ಸೂರ್ಯ ಸೇರಿ ಹಲವರು ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲುಗೊಳಿಸಿದ್ದು ಸ್ವಾಗತಾರ್ಹ. ಆದರೆ, ಈ ಹಗರಣದ ಬಗ್ಗೆ ಸಂಸದ ಹಾಗೂ ಶಾಸಕರು ಪೊಲೀಸರಿಗೆ ದೂರು ನೀಡಿ, ತನಿಖೆ ನಡೆಸಬಹುದಿತ್ತು. ಅವರದ್ದೇ ಸರಕಾರ ಇರುವಾಗ ನಾಟಕೀಯ ವರ್ತನೆ ಮಾಡಿದ್ದು ಸರಿಯಲ್ಲ ಎಂದರು.

ತೇಜಸ್ವಿ ಸೂರ್ಯ ಅವರ ಆರೋಪ ಸಾಬೀತು ಆಗುವ ಮುನ್ನವೇ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ 17 ಜನ ಯುವಕರನ್ನು ಕೆಲಸದಿಂದ ವಜಾಗೊಳಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರಾಜ್ಯದ ಜನತೆಯಲ್ಲಿ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರೆ ಶಾಸಕರೂ ಕ್ಷಮೆಯಾಚಿಸಬೇಕು. ಜತೆಗೆ, ಕೆಲಸ ಕಳೆದುಕೊಂಡು ನೋವನ್ನು ಅನುಭವಿಸುವ ಗುತ್ತಿಗೆ ಕಾರ್ಮಿಕರಿಗೆ ಈ ಜನ ಪ್ರತಿನಿಧಿಗಳ ತಮ್ಮ ಕೈಯಿಂದಲೇ ಪ್ರತಿ ಕಾರ್ಮಿಕರಿಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಚಿಂತಕ ಲಿಯೋ ಸಾಲ್ಡಾನ ಮಾತನಾಡಿ, ಕೋವಿಡ್ ವಿರುದ್ಧದ ಕ್ರಮಗಳನ್ನು ಕೇಂದ್ರೀಕೃತ ಮಾಡುವ ಬದಲು ವಿಕೇಂದ್ರೀಕರಿಸಿ ಪ್ರತಿ ವಾರ್ಡ್ ಹಾಗೂ ಪಂಚಾಯತ್‍ಗಳಲ್ಲಿ ಆಮ್ಲಜನಕ, ವೈದ್ಯರ ಚಿಕಿತ್ಸೆ, ಲಸಿಕೆ, ಔಷಧಿ ದೊರಕುವಂತೆ ಸರಕಾರ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ಇನ್ನು ಆಕ್ಸಿಜನ್ ಇಲ್ಲದೆ, ಚಾಮರಾಜನಗರ, ಕಲಬುರ್ಗಿ, ಬೆಂಗಳೂರು ಒಳಗೊಂಡಂತೆ ಇತರೆ ಜಿಲ್ಲೆಗಳಲ್ಲಿ ಆಮ್ಲಜನಕವಿಲ್ಲದೆ ಜನರು ಸಾವಿನಪ್ಪಿರುವುದು ಖಂಡನೀಯ. ಇದರ ಕುರಿತಂತೆ ಆದಷ್ಟು ಬೇಗ ತನಿಖೆ ನಡೆಸಬೇಕು ಎಂದ ಅವರು, ಬೆಡ್ ಬುಕಿಂಗ್, ಔಷಧಿ ಸರಬರಾಜುಗಳಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದಂತೆ ಪಾರದರ್ಶಕ ವ್ಯವಸ್ಥೆ ತರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಸೆಮ್ಟ್ರಾಲ್ ಕೌನ್ಸಿಲ್ ಫಾರ್ ಟ್ರೇಡ್ ಯೂನಿಯನ್ಸ್ ನ ಮೈತ್ರೇಯಿ ಕೃಷ್ಣನ್, ಸುಹೇಬ್, ಡಾ.ಸಿಲ್ವಿಯಾ ಕರ್ಪಗಂ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News