ಕೋವಿಡ್19 ಅಲೆಗೆ ಧರ್ಮ, ರಾಜಕೀಯದ ಬಣ್ಣ ಬಳಿಯದಿರೋಣ: ಮೌಲಾನ ಶಾಫಿ ಸಅದಿ

Update: 2021-05-07 15:44 GMT

ಬೆಂಗಳೂರು, ಮೇ 7: ಭಾರತದಲ್ಲಿ ಕೋವಿಡ್-19 ಎರಡನೆ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ಭಾರತೀಯರು ಒಗ್ಗಟ್ಟಾಗಿ ಈ ಮಹಾ ಮಾರಿಯನ್ನು ಎದುರಿಸಬೇಕಾಗಿದ್ದು, ಅದರಲ್ಲಿ ಧರ್ಮ, ರಾಜಕೀಯ ಪಕ್ಷಗಳ ಹೆಸರಿನಲ್ಲಿ ಆರೋಪ ಮಾಡಿ ತಮ್ಮ ಸ್ವಾರ್ಥವನ್ನು ಸಾಧಿಸುವ ಸಮಯವಲ್ಲ. ಆದುದರಿಂದ ಅಗ್ಗದ ಪ್ರಚಾರವನ್ನು ಎಲ್ಲರೂ ಕೈ ಬಿಡ ಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದ್ದಾರೆ.

ಆಡಳಿತ ಪಕ್ಷವು ಈ ಮಹಾ ರೋಗದ ಹತೋಟಿಗೆ ಬೇಕಾದ ಕ್ರಮಗಳನ್ನು ಹಾಗೂ ಸಮರ್ಪಕವಾದ ವ್ಯವಸ್ಥೆಯನ್ನು ಮಾಡ ಬೇಕಾಗಿದೆ. ಅದರಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ನೋಡಿಕೊಳ್ಳ ಬೇಕಾಗಿದೆ. ವಿರೋಧ ಪಕ್ಷಗಳು ಸರಕಾರದ ಕಾರ್ಯಾಚರಣೆಯಲ್ಲಿ ಸಹಕರಿಸಿ, ಸಮರ್ಪಕವಾಗಿ ನಿರ್ವಹಣೆಯಾಗುವಂತೆ ಸರಕಾರವನ್ನು ಎಚ್ಚರಿಸಬೇಕಾಗಿದೆ. ವಿರೋಧಕ್ಕಾಗಿ ಮಾತ್ರ ವಿರೋಧಿಸದೆ, ಪ್ರಜೆಗಳ ಹಿತಕ್ಕಾಗಿ ಈ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಕೈಜೋಡಿಸ ಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

ಈ ಪಿಡುಗಿಗೆ ಧರ್ಮವನ್ನು ಬೆರೆಸುವವರು ತಮಗೆ ಅಂಟಿದ ಧರ್ಮಾಂಧತೆಯ ಸೋಂಕನ್ನು ನಿವಾರಿಸಿ ತಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ  ಮುಸ್ಲಿಂ ಜಮಾಅತ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಸಹಾಯ್’ ತುರ್ತು ಸೇವಾ ತಂಡವನ್ನು ರಚಿಸಿದ್ದು, ಇದರ ಅಧೀನದಲ್ಲಿ ಕೋವಿಡ್ ಸೆಂಟರ್, ಆ್ಯಂಬುಲೆನ್ಸ್ ಸೇವೆ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ವರ್ಗದ ಜನರಿಗೆ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದ ಶುಲ್ಕ ವಿನಾಯಿತಿ ಹಾಗೂ ರಿಯಾಯಿತಿ ವ್ಯವಸ್ಥೆಯನ್ನು ‘ಸಹಾಯ್’ ವತಿಯಿಂದ ಮಾಡಲಾಗುತ್ತಿದೆ ಎಂದು ಮೌಲಾನ ಶಾಫಿ ಸಅದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News