ಚಿಕ್ಕಮಗಳೂರು: ಪತಿ ಮೃತಪಟ್ಟ ಸುದ್ದಿ ಕೇಳಿ ಹೃದಯಾಘಾತದಿಂದ ಕೊನೆಯುಸಿರೆಳೆದ ಪತ್ನಿ

Update: 2021-05-11 08:27 GMT

ಚಿಕ್ಕಮಗಳೂರು: ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಕೋಟೆ ಬಡಾವಣೆಯಲ್ಲಿ ಸೋಮವಾರ ನಡೆದಿದೆ.

ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಹರೀಶ್ ಅವರನ್ನು ನಗರದ ಕೆಆರ್ ಎಸ್ ಆಸ್ಪತ್ರೆಗೆ ಸೋಮವಾರ ಮಧ್ಯಾಹ್ನ  ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಆಕ್ಸಿಜನ್ ನೀಡಿದ್ದು, ಆಕ್ಸಿಜನ್ ಖಾಲಿಯಾಗಿದ್ದರಿಂದ ವೈದ್ಯರು ಬೇರೆ ಅಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ನಂತರ ಕುಟುಂಬಸ್ಥರು ಹರೀಶ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.

ಹರೀಶ್ ಮೃತಪಟ್ಟ ಸುದ್ದಿಯನ್ನು ಅವರ ಪುತ್ರ ತಾಯಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದರು. ಪತಿ ಮೃತಪಟ್ಟ ಸುದ್ದಿ ಅರಿತ ಪತ್ನಿ ಸೌಮ್ಯ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಹರೀಶ್ ಹಾಗೂ ಸೌಮ್ಯಾ ದಂಪತಿಗೆ ಕೋವಿಡ್ ಸೋಂಕು ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದು, ದಂಪತಿ ಓರ್ವ ಮಗನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News