ಕೊರೋನದಿಂದ ತಾಯಿ ಮೃತಪಟ್ಟ ಕೆಲ ಕ್ಷಣಗಳಲ್ಲೇ ಹೃದಯಾಘಾತದಿಂದ ಮಗ ಸಾವು

Update: 2021-05-11 12:46 GMT

ಮಂಡ್ಯ, ಮೇ11: ಕೊರೋನ ಸೋಂಕಿಗೊಳಗಾಗಿ ತಾಯಿ ಸಾವನ್ನಪ್ಪಿದರೆ, ಮತ್ತೊಂದೆಡೆ ಸೋಂಕಿಗೊಳಗಾದ ತಾಯಿಯ ಬಗ್ಗೆ ಯೋಚಿಸುತ್ತಾ ಊಟ ಬಿಟ್ಟಿದ್ದ ಮಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಸುಭಾಷ್‍ನಗರದ ನಿವಾಸಿ ಸುಜಾತಾ ಹಾಗೂ ಆಕೆಯ ಪುತ್ರ ಸಿ.ಎನ್.ರಮೇಶ್ ಮೃತಪಟ್ಟವರು. ಸುಜಾತಾ ಅವರು ಮೇ 7 ರಂದು ಸೋಂಕಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಕಳೆದೆರಡು ದಿನಗಳ ಹಿಂದೆ ಸುಜಾತಾ ಅವರಿಗೆ ಸೋಂಕು ಉಲ್ಬಣಿಸಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ತಡರಾತ್ರಿ 8 ಗಂಟೆ ಸಮಯಕ್ಕೆ ಕೊನೆಯುಸಿರೆಳೆದಿದ್ದಾರೆ.

ತಾಯಿ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ ಹಿನ್ನೆಲೆಯಲ್ಲಿ ಮಗ ರಮೇಶ್ ಮಾನಸಿಕವಾಗಿ ಕುಗ್ಗಿಹೋಗಿದ್ದರು. ತಾಯಿಯನ್ನು ನೆನೆದು ಊಟವನ್ನು ಕೂಡಾ ಬಿಟ್ಟಿದ್ದರು ಎನ್ನಲಾಗಿದ್ದು, ತಾಯಿ ಸಾವನ್ನಪ್ಪಿದ ಕೆಲವು ಕ್ಷಣಗಳಲ್ಲೇ ಅವರ ನಿವಾಸದಲ್ಲೇ ಹೃದಯಾಘಾತಕ್ಕೊಳಗಾಗಿ ರಮೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News