ತಾಯಿಯ ಶವಸಂಸ್ಕಾರ ಮಾಡಿ ಹಿಂದಿರುಗುವ ವೇಳೆ ಮಗ ಹೃದಯಾಘಾತದಿಂದ ಸಾವು
ಕೊಳ್ಳೇಗಾಲ, ಮೇ 15: ಕೊರೋನದಿಂದ ಮೃತಪಟ್ಟ ತಾಯಿಯ ಶವಸಂಸ್ಕಾರ ಮಾಡಿ ಹಿಂದಿರುಗುವ ವೇಳೆ ಮಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣ ನಿವಾಸಿ ಹಾಗೂ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ ಸರೋಜಮ್ಮ(82) ಹಾಗೂ ಆಕೆಯ ಮಗ ಸುರೇಶ್(60) ಮೃತಪಟ್ಟವರು.
ಶುಕ್ರವಾರ ಸರೋಜಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದು, ಈ ಸಂದರ್ಭ ಕೊರೋನ ಪರೀಕ್ಷೆ ಮಾಡಿಸಿದ್ದಾರೆ. ವರದಿ ಪಾಸಿಟಿವ್ ಬಂದಿದ್ದರಿಂದ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದರು. ಇಂದು ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಚಾ.ನಗರ ತಾಲೂಕು ಹುಳ್ಳಿನಂಜಪುರ ಗ್ರಾಮದ ಸರೋಜಮ್ಮ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಅಲ್ಲಿಂದ ವಾಪಸ್ ಬರುವ ವೇಳೆ ಅವರ ಮಗ ಸುರೇಶ್ ಎದೆ ನೋವು ಕಾಣಿಸಿಕೊಂಡು, ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸುರೇಶ್ ರವರ ಮೃತದೇಹವನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದಾಗ ನೆಗಟಿವ್ ಬಂದಿದ್ದು, ನಂತರ ಶವಸಂಸ್ಕಾರ ನಡೆಸಲಾಯಿತು.