ತೌಕ್ತೆ ಚಂಡಮಾರುತ ಭೀತಿ: ತುರ್ತು ಸಭೆ ಕರೆದ ಸಚಿವರು, ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಚರ್ಚೆ

Update: 2021-05-16 12:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 16: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ 'ತೌಕ್ತೆ' ಚಂಡಮಾರುತವು ಕರ್ನಾಟಕ ರಾಜ್ಯದ ಕಡೆಗೆ ಆಗಮಿಸಿದ್ದು, ಈ ಕುರಿತಂತೆ ಸಂಭವನೀಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ಕರೆದು ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ರವಿವಾರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, `ರಾಜ್ಯದಿಂದ ಕೇವಲ 200 ಕಿ.ಮೀ.ದೂರದಲ್ಲಿರುವ ಚಂಡಮಾರುತ ತೌಕ್ತೆ ರಾಜ್ಯಕ್ಕೆ ಪ್ರವೇಶಿಸಿದೆ. ಹವಾಮಾನ ಕೇಂದ್ರವು ಪ್ರತಿ ನಿಮಿಷ ಇದರ ಮಾನಿಟರ್ ಮಾಡುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಈ ಚಂಡಮಾರುತ ಅಪ್ಪಳಿಸಲಿದ್ದು, ಮೇ 18ರವರೆಗೂ ಇದರ ಪ್ರಭಾವ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಮೇ 18ರ ವರೆಗೂ ಈ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದರು.

'ಅದೇ ರೀತಿ ತಗ್ಗು ಪ್ರದೇಶದ ಜನರನ್ನ ತಕ್ಷಣ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಮೂರು ದಿನಗಳಿಂದ ಕಂದಾಯ ಇಲಾಖೆಯು ಆ ಭಾಗದ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ಹಾಗೂ ದಿನದ ಅಲರ್ಟ್ ನೀಡುತ್ತಿತ್ತು. ಈಗಾಗಲೇ ಈ ಮೂರು ಜಿಲ್ಲೆಗಳಲ್ಲಿ 8 ರಿಲೀಫ್ ಕ್ಯಾಂಪ್‍ಗಳನ್ನ ತೆರೆಯಲಾಗಿದೆ. ಇಲ್ಲಿ 10 ಸಾವಿರ ಜನರು ಉಳಿದುಕೊಳ್ಳಬಹುದಾಗಿದೆ. ಎನ್‍ಡಿಆರ್‍ಎಫ್ ನಿಧಿಯಿಂದ ನಿರ್ಮಿಸಲಾಗಿರುವ ಸುಸಜ್ಜಿತ ಭವನಗಳು ಇವುಗಳಾಗಿದ್ದು, ಈಗಾಗಲೇ ನಿರಾಶ್ರಿತರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನ ಒದಗಿಸಲು ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ' ಎಂದರು.

ಈಗಾಗಲೇ ಎರಡು ಎನ್‍ಡಿಆರ್‍ಎಫ್ ತಂಡಗಳು ಬಂದಿಳಿದಿದ್ದು, ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಸನ್ನದ್ಧವಾಗಿವೆ. ಎಸ್‍ಡಿಆರ್‍ಎಫ್ ತಂಡವಾದ ಪೊಲೀಸ್, ಅಗ್ನಿಶಾಮಕ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದ್ದು, ಈ ಮೂರು ಜಿಲ್ಲೆಯ ಎಲ್ಲ ಸರಕಾರಿ ಅಧಿಕಾರಿಗಳ ರಜೆಗಳನ್ನ ರದ್ದುಗೊಳಿಸಲಾಗಿದೆ. ಯಾವುದೇ ಅನಾಹುತವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡಿದ್ದು, ಇದಕ್ಕಾಗಿ ಅಗತ್ಯವಿರುವ ಹಣವನ್ನ ಮೀಸಲಿಡಲಾಗಿದೆ. ಉಡುಪಿಯಲ್ಲಿ 23 ಕೋಟಿ ರೂ., ಉತ್ತರ ಕನ್ನಡದಲ್ಲಿ 60 ಕೋಟಿ ರೂ. ಹಾಗೂ ದಕ್ಷಿಣ ಕನ್ನಡದಲ್ಲಿ 12 ಕೋಟಿ ರೂ. ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಮೀಸಲಿದೆ. ಇದನ್ನ ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಆದೇಶಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News