ವಿಪತ್ತು ಸ್ಪಂದನಾ ಪಡೆಯ ಬಲ ಹೆಚ್ಚಳಕ್ಕೆ ಆದ್ಯತೆ: ಗೃಹ ಸಚಿವ ಬೊಮ್ಮಾಯಿ

Update: 2021-05-16 17:11 GMT

ಬೆಂಗಳೂರು, ಮೇ 16: ರಾಜ್ಯ ವಿಪತ್ತು ಸ್ಪಂದನಾ ಪಡೆಯ ಬಲವನ್ನು ಹೆಚ್ಚಿಸಲಾಗುವುದು. ಅದರ ಜೊತೆಗೆ ಪ್ರಸಕ್ತ ವರ್ಷದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ವಾಹನ, ಅತ್ಯಾಧುನಿಕ ಉಪಕರಣ ಖರೀದಿಯ ಜೊತೆಗೆ ರಾಜ್ಯದ ಎರಡು ಕಡೆ ಎಸ್ಡಿಆರ್ಎಫ್ ತಂಡದ ಕಚೇರಿಯನ್ನು ಸ್ಥಾಪಿಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ರವಿವಾರ ನಗರದಲ್ಲಿ ರಾಜ್ಯ ಅಗ್ನಿಶಾಮಕ ತುರ್ತು ಸೇವೆ ಗೃಹರಕ್ಷಕ ಪೌರರಕ್ಷಣೆ ನಿರ್ದೇಶನಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾದ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರಾಜ್ಯ ಸರಕಾರ ಎಸ್.ಡಿ.ಆರ್.ಎಫ್‍ಗೆ ಬಲ ನೀಡುವ ಕೆಲಸವನ್ನು ಮುಂದುವರಿಸುತ್ತದೆ. ಕಳೆದ ವರ್ಷ 100 ಜನ ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಸಕ್ತ ವರ್ಷ ಮತ್ತೆ ನೂರು ಜನ ನಿವೃತ್ತ ಮಿಲಿಟರಿ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಆದೇಶಿಸಲಾಗಿದೆ. ದಾವಣಗೆರೆ, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ನಡುವೆ 2 ಎಸ್ಡಿಆರ್ಎಫ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುವುದು. ಬೆಳಗಾವಿಯಲ್ಲಿ ಇತ್ತೀಚೆಗೆ ಪದೇಪದೇ ಪ್ರವಾಹ ಉಂಟಾಗುತ್ತದೆ. ಅದನ್ನು ನಿವಾರಣೆ ಮಾಡಲು ಎಸ್ಡಿಆರ್ಎಫ್ ಪೂರ್ಣಪ್ರಮಾಣದ ತಂಡ ಆ ಭಾಗದಲ್ಲಿ ಇರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಕೃತಿ ವಿಕೋಪ ಎದುರಿಸಲು ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಾಗಿತ್ತು. ಅದರಡಿ ಅತ್ಯಾಧುನಿಕ ಉಪಕರಣಗಳನ್ನು ಹಾಗೂ ವಾಹನಗಳನ್ನು ಖರೀದಿ ಮಾಡಲಾಗಿದೆ. ಅದೇ ರೀತಿ ಈ ವರ್ಷ ಕೂಡ 15 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ತೌಕ್ತೆ ಚಂಡಮಾರುತಕ್ಕೆ ಉಡುಪಿ ಜಿಲ್ಲೆಯ 34 ಮನೆಗಳು ತುತ್ತಾಗಿವೆ. ಸುರತ್ಕಲ್ ಬಳಿ ಸಮುದ್ರದಲ್ಲಿ 8 ಜನ ಚಂಡ ಮಾರುತಕ್ಕೆ ಸಿಲುಕಿ ಕಾಣೆಯಾಗಿದ್ದಾರೆ. ಅವರ ಪೈಕಿ ಇಬ್ಬರನ್ನು ಪತ್ತೆ ಮಾಡಲಾಗಿದೆ. ಉಳಿದವರ ಪತ್ತೆ ಕೆಲಸ ಮುಂದುವರಿದಿದೆ. ಒಟ್ಟು 1 ಸಾವಿರ ಅನುಭವಿ ಸಿಬ್ಬಂದಿ ಚಂಡಮಾರುತ ಎದುರಿಸಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯದ ನಿರ್ದೇಶಕ ಅಮರ್ ಕುಮಾರ್ ಪಾಂಡೆ, ಎಡಿಜಿಪಿ ಸುನೀಲ್ ಅಗರ್ವಾಲ್, ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಕೃತಿ ವಿಕೋಪ ಎದುರಿಸಲು ಬೇಕಾಗುವ ಬೇಸಿಕ್ ಟೂಲ್ ಬಾಕ್ಸ್, ಹೈವೋಲ್ಟೇಜ್ ಸೇಫ್ಟಿ ರಾಡ್, ಪೋರ್ಟೆಬಲ್ ಸ್ಟೇಚರ್, ಸ್ಕೂಬಾ ಡೈವಿಂಗ್ ಸೂಟ್, ಅಂಡರ್ ವಾಟರ್ ಟಾರ್ಚ್, ವುಡ್ ಕಟಿಂಗ್ ಮಷೀನ್, ಕಾಂಕ್ರೀಟ್ ಕಟಿಂಗ್ ಮಷೀನ್, ಪ್ಲಾಸ್ಮ ಕಟರ್,  ಹೈಡ್ರಾಲಿಕ್ ಹೆವಿವೇಟ್ ಚಿಪ್ಪಿಂಗ್ ಹಮ್ಮರ್, ಲಾರಿ ಸೇರಿದಂತೆ ಇತರೆ ಉಪಕರಣಗಳನ್ನು ಇಂದು ವಿಪತ್ತು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗಿದೆ'

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News