×
Ad

ರಾಜ್ಯಕ್ಕೆ ಸಾಲದ ಹೊರೆ ಹೊರಿಸಿದ್ದು ಸಿದ್ದರಾಮಯ್ಯ: ಬಿಜೆಪಿ ಟೀಕೆ

Update: 2021-05-17 23:35 IST

ಬೆಂಗಳೂರು, ಮೇ 17: ಸಿದ್ದರಾಮಯ್ಯ ಅವರೇ, ವಾಸ್ತವಾಂಶಗಳನ್ನು ತೆರೆದಿಟ್ಟರೆ ಅದನ್ನೇ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೀರಿ. ನಿಮ್ಮ ಸಾಲ ಸಾಧನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇವೆ. ಜಾರಿಕೊಳ್ಳುವ ಪ್ರಯತ್ನ ಮಾಡದೆ, ವಾಸ್ತವವನ್ನು ಒಪ್ಪಿಕೊಳ್ಳಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಬಿಜೆಪಿ, 2012-13 ರ ಕೊನೆಯಲ್ಲಿ ರಾಜ್ಯದ ಒಟ್ಟಾರೆ ಸಾಲ ಎತ್ತುವಳಿ 1 ಲಕ್ಷ ಕೋಟಿ. ರಾಜ್ಯದ ಒಟ್ಟಾರೆ ಸಾಲದ ಮೊತ್ತ ಈ ಪ್ರಮಾಣ ತಲುಪುವುದಕ್ಕೆ ಬೇಕಾದ ಸಮಯ 62 ವರ್ಷ. ಸಿದ್ದರಾಮಯ್ಯ ಸರಕಾರದ ಮೊದಲ 4 ವರ್ಷದ ಸಾಲ ಎತ್ತುವಳಿ 2 ಲಕ್ಷ ಕೋಟಿ. ಕೊನೆಯ ವರ್ಷ ಹಾಗೂ ಮೈತ್ರಿ ಸರಕಾರದ ಅವಧಿಯ ಸಾಲ ಪ್ರಮಾಣ 3 ಲಕ್ಷ ಕೋಟಿ ಎಂದು ಟೀಕಿಸಿದೆ.

ರಾಜ್ಯಕ್ಕೆ ಸಾಲದ ಹೊರೆ ಹೊರಿಸಿದವರು ಯಾರೆಂಬುದನ್ನು ಈಗಲಾದರೂ ಒಪ್ಪಿಕೊಳ್ಳುವಿರಾ ಸಿದ್ದರಾಮಯ್ಯ? ಅನೇಕ ದಶಕಗಳಿಂದ ರಾಜ್ಯ ಕಾಯ್ದುಕೊಂಡು ಬಂದ ವಿತ್ತೀಯ ಶಿಸ್ತನ್ನು ನಾಲ್ಕೇ ವರ್ಷದಲ್ಲಿ ಅಸ್ತವ್ಯಸ್ತಗೊಳಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ನಮ್ಮ ಮಕ್ಕಳ ಮೇಲೆ ಸಾಲದ ಹೊರೆ ಹೊರಿಸಿದ್ದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಮೈತ್ರಿ ಸರಕಾರದ ಅವಧಿಯ ಒಟ್ಟು 7 ವರ್ಷದಲ್ಲಿ ರಾಜ್ಯದ ಒಟ್ಟಾರೆ ಸಾಲ ಪ್ರಮಾಣ 3 ಪಟ್ಟು ಹೆಚ್ಚಳವಾಗಿದೆ. ಟ್ವಿಟರ್ ಪ್ರವಚನಕಾರ ಸಿದ್ದರಾಮಯ್ಯ ರಾಜ್ಯದ ಮೇಲೆ ಸಾಲದ ಹೊರೆ ಹೊರಿಸಿ ನನ್ನ ಮಕ್ಕಳ ಲಸಿಕೆ ಎಲ್ಲಿದೆ ಎಂದು ಬೂಟಾಟಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಗಾರಿದೆ.

ನನ್ನ ಅವಧಿಯಲ್ಲಿ 'ಒಂದು ಬಾರಿಯೂ ವಿತ್ತೀಯ ಕೊರತೆ ಆಗಿಲ್ಲ' ಎನ್ನುವ ಸಿದ್ದರಾಮಯ್ಯ ಅವರೇ, ನಿಮ್ಮ ಆಡಳಿತದ 5 ವರ್ಷಗಳಲ್ಲಿ ಸಾಲದ ಪ್ರಮಾಣ ದುಪ್ಪಟ್ಟಾಗಿತ್ತು. ಅಕ್ಕಿ ಕೊಟ್ಟೆ, ಮೊಟ್ಟೆ ಕೊಟ್ಟೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ರಾಜ್ಯದ ಜನತೆಯ ತಲೆಯ ಮೇಲೆ ಸಾಲವನ್ನು ಹೊರಿಸಿದರ ಬಗ್ಗೆ ಹೇಳಿಕೊಳ್ಳುವಿರಾ? ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯಕ್ಕೆ ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆಯಲ್ಲಿ ಮೋದಿ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದು ಸಿದ್ದರಾಮಯ್ಯ ಆರೋಪ. ಸಿದ್ದರಾಮಯ್ಯ ಮತ್ತೊಮ್ಮೆ ಹೊಸದಾಗಿ ಸಂಕಲನ, ವ್ಯವಕಲನದ ಪಾಠ ಕಲಿಯುವ ಅಗತ್ಯವಿದೆ. ಬಾಯಿ ಬಿಟ್ಟರೆ ಪ್ರಖಂಡ ಪಂಡಿತರಂತೆ ಬೊಗಳೆ ಬಿಡುವ ಸಿದ್ದರಾಮಯ್ಯಗೆ ಸತ್ಯ ಹೇಳಲು ಅಂಜಿಕೆಯೇಕೆ? ಎಂದು ಬಿಜೆಪಿ ಹೇಳಿದೆ.

ಯುಪಿಎ ಸರಕಾರ ಅಧಿಕಾರದಲ್ಲಿದ್ದ 10 ವರ್ಷದ ಅವಧಿಯಲ್ಲಿ ದೊರೆತ ತೆರಿಗೆ ಪಾಲು ಹಾಗೂ ಅನುದಾನದ ಒಟ್ಟು ಮೊತ್ತ 1,06,698 ಕೋಟಿ. ತೆರಿಗೆ ಪಾಲು- 53,860 ಕೋಟಿ, ಅನುದಾನ-52838 ಕೋಟಿ, ಮೋದಿ ಸರಕಾರ ತನ್ನ ಮೊದಲ 5 ವರ್ಷದ ಅವಧಿಯಲ್ಲಿ ನೀಡಿದ ಅನುದಾನ ಹಾಗೂ ತೆರಿಗೆ ಪಾಲು 2,34,204 ಕೋಟಿ ಎಂದು ಬಿಜೆಪಿ ತಿಳಿಸಿದೆ.

ಮೋದಿ ಸರಕಾರ ನೀಡಿದ ತೆರಿಗೆ ಮತ್ತು ಅನುದಾನ, ತೆರಿಗೆ ಪಾಲು- 1,60,516 ಕೋಟಿ, ಅನುದಾನ-73688 ಕೋಟಿ. ಯುಪಿಎ ಸರಕಾರ 10 ವರ್ಷದಲ್ಲಿ ರಾಜ್ಯಕ್ಕೆ ನೀಡಿದ ಹಣಕಾಸಿನ ನೆರವಿನ ಶೇ.119 ಪಟ್ಟು ಹೆಚ್ಚಿನ ಅನುದಾನ ಮೋದಿ ಸರಕಾರ ನೀಡಿದೆ. ಹಾಗಾದರೆ ರಾಜ್ಯಕ್ಕೆ ಅನ್ಯಾಯವಾಗಿದ್ದು ಯಾರಿಂದ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಯುಪಿಎ ಸರಕಾರದ 10 ವರ್ಷದ ಅವಧಿಯಲ್ಲಿ ನೀಡಿದ ತೆರಿಗೆ ಪಾಲು ಹಾಗೂ ಅನುದಾನ- 1,06,698 ಕೋಟಿ. ಮೋದಿ ಸರಕಾರ ತನ್ನ ಮೊದಲ 5 ವರ್ಷದ ಅವಧಿಯಲ್ಲಿ ನೀಡಿದ ಅನುದಾನ ಹಾಗೂ ತೆರಿಗೆ ಪಾಲು- 2,34,204 ಕೋಟಿ. ಲೆಕ್ಕದ ಮೇಷ್ಟ್ರು ಸಿದ್ದರಾಮಯ್ಯ ಅವರೇ, ನೀವು ಲೆಕ್ಕ ತಪ್ಪಿದ್ದೆಲ್ಲಿ? ಎಂದು ಬಿಜೆಪಿ ಟೀಕಿಸಿದೆ.

ಪ್ರಧಾನಿ ಮೋದಿ ಅವರ ಮೊದಲ 5 ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ರಾಜ್ಯದ ರಸ್ತೆ ಅಭಿವೃದ್ಧಿಗೆ, ಇಂಧನ ಹಾಗೂ ಗ್ರಾಮೀಣಾಭಿವೃದ್ಧಿಗೆ ವಿಫುಲ ನೆರವು ಸಿಕ್ಕಿದ್ದನ್ನು ಮರೆತೇ ಬಿಟ್ಟಿರಾ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News