ಲಾಕ್ಡೌನ್ ಮಧ್ಯೆಯೂ ಬಿಜೆಪಿ ಮುಖಂಡನ ವಿವಾಹ ವಾರ್ಷಿಕೋತ್ಸವ: ನೆಟ್ಟಿಗರ ಆಕ್ರೋಶ
ಹುಬ್ಬಳ್ಳಿ, ಮೇ 20: ಬಿಜೆಪಿ ಮುಖಂಡ ಮತ್ತು ಸಚಿವ ಜಗದೀಶ್ ಶೆಟ್ಟರ್ ಅವರ ಆಪ್ತರಾಗಿರುವ ಮಲ್ಲಿಕಾರ್ಜುನ ಸಾವಕಾರ್ ದಂಪತಿ ಮದುವೆ 25ನೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಮೂಲಕ ಕೊರೋನ ನಿಯಮವನ್ನು ಉಲ್ಲಂಘಿಸಿದ್ದು, ಸಾಮಾನ್ಯ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಇನ್ನೊಂದು ನ್ಯಾಯವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮೇ 18 ರಿಂದ 24ರವರೆಗೂ ಜಿಲ್ಲೆಯಲ್ಲಿ ಯಾವುದೇ ಸಭೆ-ಸಮಾರಂಭಗಳನ್ನು ಮಾಡದಂತೆ ಧಾರವಾಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ ಮದುವೆ ಕಾರ್ಯಕ್ರಮಕ್ಕೂ ನಿಷೇಧ ವಿಧಿಸಿದೆ. ಆದರೆ ಮಲ್ಲಿಕಾರ್ಜುನ ಸಾವಕಾರ್ ದಂಪತಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಈ ವೇಳೆ ಮಾಸ್ಕ್ ಧರಿಸಿಲ್ಲ, ಸುರಕ್ಷಿತ ಅಂತರವನ್ನೂ ಕಾಪಾಡಿಕೊಂಡಿಲ್ಲ ಎಂದು ಹೇಳಲಾಗಿದೆ.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರೂ ಮಾಸ್ಕ್ ಹಾಕಿಕೊಂಡಿರಲಿಲ್ಲ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಗೆ ತಿಳಿಹೇಳಬೇಕಿದ್ದ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸಿದರೆ ಹೇಗೆ? ಕೋವಿಡ್ ತಡೆಗಟ್ಟುವವರು ಯಾರು? ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.