ತಯಾರಿಕೆ ಕಂಪೆನಿಗಳಿಂದಲೇ ಲಸಿಕೆ ನೇರ ಖರೀದಿ: ಡಿಸಿಎಂ ಡಾ. ಅಶ್ವತ್ಥನಾರಾಯಣ
ಬೆಂಗಳೂರು, ಮೇ 31: ಜಾಗತಿಕವಾಗಿ ಕೋವಿಡ್ ಲಸಿಕೆ ಖರೀದಿ ಮಾಡಲು ಮುಂದಾಗಿರುವ ರಾಜ್ಯಕ್ಕೆ ಇ-ಟೆಂಡರ್ ಸಲ್ಲಿಸಿದ್ದ ಎರಡು ಕಂಪೆನಿಗಳು ಸಕಾಲಕ್ಕೆ ಅಗತ್ಯ ದಾಖಲೆಗಳನ್ನು ನೀಡದ ಕಾರಣಕ್ಕೆ ಸರಕಾರವೇ ನೇರವಾಗಿ ತಯಾರಿಕಾ ಕಂಪೆನಿಗಳಿಂದಲೇ ಲಸಿಕೆ ಖರೀದಿಸಲು ಮುಂದಾಗಿದೆ.
ಸೋಮವಾರ ನಗರದಲ್ಲಿ ಚಲನಚಿತ್ರ ಕಲಾವಿದರ ಸಂಘದಲ್ಲಿ ಕನ್ನಡ ಸಿನಿಮಾ ಕಲಾವಿದರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ರಾಜ್ಯ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಸಿಕೆ ಪೂರೈಕೆ ಸಂಬಂಧ ಮೇ 15ರಂದು ಕರೆಯಲಾಗಿದ್ದ ಟೆಂಡರ್ನಲ್ಲಿ ಮುಂಬೈಯ ಬುಲಕ್ ಎಂಆರ್ಒ ಇಂಡಸ್ಟ್ರೀಯಲ್ ಸಪ್ಲೈ ಹಾಗೂ ಬೆಂಗಳೂರಿನ ತುಳಸಿ ಸಿಸ್ಟಮ್ಸ್ ಕಂಪೆನಿಗಳು ಲಸಿಕೆ ಪೂರೈಕೆ ಮಾಡುವುದಾಗಿ ಮುಂದೆ ಬಂದಿದ್ದವು. ಟೆಂಡರ್ಗೆ ಅರ್ಜಿ ಹಾಕಿಕೊಂಡಿದ್ದವು. ಆ ಕಂಪೆನಿಗಳು ತಯಾರು ಮಾಡುವ ಕಂಪೆನಿಗಳಿಂದ ಲಸಿಕೆ ಪಡೆದು ರಾಜ್ಯಕ್ಕೆ ಪೂರೈಸುವುದಾಗಿ ಹೇಳಿದ್ದವು.
ಇದಕ್ಕೆ ಸಂಬಂಧಿಸಿ ಹಣಕಾಸು ದಾಖಲೆಗಳೂ ಸೇರಿ `ಪೂರೈಕೆ ಖಾತರಿ'ಯ ದಾಖಲೆ ಹಾಗೂ ಲಸಿಕೆಯ `ತಾಂತ್ರಿಕ ದಾಖಲೆ'ಗಳನ್ನು ಸಲ್ಲಿಸಲಿಲ್ಲ. ಬದಲಿಗೆ ಎರಡು ಸಲ ವರ್ಚುಯಲ್ ಸಭೆಗಳನ್ನು ಕರೆದರೂ ಆಯಾ ಕಂಪೆನಿಗಳ ಅಧಿಕಾರಿಗಳು ಭಾಗವಹಿಸಲಿಲ್ಲ. ಜತೆಗೆ, ರಷ್ಯಾ ಮೂಲದ `ಸ್ಪುಟ್ನಿಕ್' ಲಸಿಕೆ ತಯಾರಿಸುವ ಕಂಪೆನಿಯ ಜತೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳನ್ನು ಸಲ್ಲಿಸುವಲ್ಲಿಯೂ ಆ ಕಂಪೆನಿಗಳು ವಿಫಲವಾದವು. ಈ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಜಾಗತಿಕ ಟೆಂಡರ್ ತಿರಸ್ಕøತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಲಸಿಕೆ ಖರೀದಿ ಮಾಡುವ ಉದ್ದೇಶ ಇದೆ. ಜಗತ್ತಿನ ಯಾವುದೇ ಔಷಧ ಕಂಪೆನಿ ಲಸಿಕೆ ಮಾರಲು ಮುಂದೆ ಬಂದರೆ ಖರೀದಿ ಮಾಡಲಾಗುವುದು. ಈಗಾಗಲೇ ಜಾಗತಿಕ ಮಟ್ಟದಲ್ಲಿ ಲಸಿಕೆ ತಯಾರು ಮಾಡುವ ಎಲ್ಲ ಕಂಪೆನಿಗಳಿಗೆ ಈ ಸಂದೇಶ ರವಾನಿಸಲಾಗಿದೆ. ಲಸಿಕೆಗಾಗಿ ಕಾಯುತ್ತಾ ಕೂರಲು ಸಾಧ್ಯವಿಲ್ಲ. ಮೂರನೇ ಅಲೆಯ ಭೀತಿ ನಮ್ಮ ಮುಂದಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲಾಕ್ಡೌನ್ ಮುಂದುವರಿಕೆ ಚರ್ಚೆ ನಡೆದಿಲ್ಲ: ಲಾಕ್ಡೌನ್ ಮುಂದುವರಿಸಬೇಕೆ ಬೇಡವೇ ಎಂಬ ಬಗ್ಗೆ ಸರಕಾರ ಇನ್ನೂ ಯೋಚನೆ ಮಾಡಿಲ್ಲ. ಆದರೆ, ಕೆಲ ವಿಭಾಗಗಳಲ್ಲಿ ಅನ್ಲಾಕ್ ಆಗಲೇಬೇಕಿದೆ. ಆದರೆ, ಈ ಬಗ್ಗೆ ಇಷ್ಟು ಬೇಗ ಏನೂ ಹೇಳಲಾಗದು ಎಂದು ಡಾ.ಅಶ್ವತ್ಥ ನಾರಾಯಣ ಇದೇ ವೇಳೆ ಹೇಳಿದರು.
`ಲಾಕ್ಡೌನ್ ಮುಗಿಯಲು ಇನ್ನೂ ಒಂದು ವಾರ ಕಾಲಾವಕಾಶವಿದೆ. ಇಷ್ಟು ಬೇಗ ಏನನ್ನೂ ಹೇಳಲಾಗದು. ಅಂಕಿ-ಅಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ. ತಜ್ಞರ ಅಭಿಪ್ರಾಯ ಪಡೆಯಬೇಕಿದೆ. ಆದರೆ, ಜೀವ ಉಳಿಯುವುದರ ಜತೆಗೆ ಜೀವನವೂ ನಡೆಯಬೇಕು. ಹೀಗಾಗಿ ಕೆಲ ರಿಯಾಯಿತಿಗಳನ್ನು ಕೊಡಬೇಕು' ಎಂದು ಡಾ.ಅಶ್ವತ್ಥ ನಾರಾಯಣ ಇದೇ ವೇಳೆ ಮಾಹಿತಿ ನೀಡಿದರು.
ಎಲ್ಲ ಕಲಾವಿದರಿಗೂ ಲಸಿಕೆ: ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ 18 ವರ್ಷ ವಯಸ್ಸಿನ ಮೇಲ್ಪಟ್ಟ 15 ಸಾವಿರ ಕಲಾವಿದರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದ ಅವರು, ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ಸೇರಿ ಆಹಾರ ಧಾನ್ಯ ನೀಡಲು ಸರಕಾರ ತಯಾರಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವೆ. ಸಿಎಂ ಗೃಹ ನಿರ್ಮಾಣ ಯೋಜನೆ ಅಡಿಯಲ್ಲಿ ಬಡ ಕಲಾವಿದರಿಗೆ ರಿಯಾಯಿತಿ ಬೆಲೆಯಲ್ಲಿ ಮನೆ ನೀಡುವ ಬಗ್ಗೆಯೂ ಸರಕಾರ ಉದ್ದೇಶಿಸಿದೆ. ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದ್ದು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಿಕೊಳ್ಳಬಹುದು ಎಂದು ತಿಳಿಸಿದರು.
ನಮ್ಮ ನಾಡಿನ ಕಲೆ ಸಂಸ್ಕೃತಿ ರಕ್ಷಣೆಯಲ್ಲಿ ಕಲಾವಿದರ ಪಾತ್ರ ದೊಡ್ಡದು. ಇವರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಹೀಗಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕುವುದನ್ನು ಸರಕಾರ ಇಷ್ಟಪಡುವುದಿಲ್ಲ. ಮೊದಲ ಅಲೆಯ ಕಾಲದಲ್ಲೂ ಚಿತ್ರರಂಗದ ನೆರವಿಗೆ ಸರಕಾರ ಧಾವಿಸಿತ್ತು. ಈಗಲೂ ನೆರವಿಗೆ ಬರಲಿದೆ. ಯಾವ ಕಾರಣಕ್ಕೂ ಸಿನಿಮಾ ರಂಗ ಕಷ್ಟಕ್ಕೆ ಸಿಲಿಕಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಸಂಸದೆ ಸುಮಲತಾ ಅಂಬರೀಶ್, ಕಲಾವಿದರ ಸಂಘದ ಅಧ್ಯಕ್ಷ ರಾಕ್ಲೈನ್ ವೆಂಕಟೇಶ್, ಹಿರಿಯ ಕಲಾವಿದ ದೊಡ್ಡಣ್ಣ ಅವರು ಕಲಾವಿದರ ಸಮಸ್ಯೆಗಳ ಬಗ್ಗೆ ಡಿಸಿಎಂ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಚಿತ್ರರಂಗದ ಅನೇಕರು ಇದ್ದರು.