ರೈತರಿಗೆ ಎಕರೆಗೆ ಹತ್ತು ಸಾವಿರ ರೂ.ಪರಿಹಾರ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ
ಹುಬ್ಬಳ್ಳಿ, ಮೇ 31: `ಕೋವಿಡ್ ಲಾಕ್ಡೌನ್, ಮಾರುಕಟ್ಟೆ ಸಮಸ್ಯೆ, ಬೆಂಬಲ ಬೆಲೆ ಇಲ್ಲದೆ ಕಂಗಾಲಾಗಿರುವ ಹಣ್ಣು-ತರಕಾರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅವರ ಧ್ವನಿಯಾಗಿ ಅವರ ಸಮಸ್ಯೆಗಳನ್ನು ರಾಜ್ಯ ಸರಕಾರಕ್ಕೆ ತಲುಪಿಸುವುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಸೋಮವಾರ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಳೀಯ ರೈತರ ಜಮೀನಿಗೆ ಖುದ್ದು ಭೇಟಿ ನೀಡಿ, ಅವರ ಸಂಕಷ್ಟಗಳನ್ನು ಆಲಿಸಿದ ಅವರು, ರೈತರ ಬೆನ್ನಿಗೆ ನಿಲ್ಲುವ ಭರವಸೆ ಕೊಟ್ಟರು. `ಕೋವಿಡ್-19 ಸೋಂಕಿನ ಸಮಯದಲ್ಲಿ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. 6ರಿಂದ 8ಗಂಟೆ ನಡುವೆ ಕೇವಲ ಎರಡೇ ತಾಸಿನ ಅವಧಿಯಲ್ಲಿ ಅವರು ತರಕಾರಿ, ಹಣ್ಣು-ಹಂಪಲು ಮತ್ತು ಇತರ ಬೆಳೆಗಳನ್ನು ಮಾರಾಟ ಮಾಡಬೇಕೆಂಬ ಆದೇಶದಿಂದ ಎಲ್ಲ ಬೆಳೆಗಳು ಹಾಳಾಗುತ್ತಿವೆ ಎಂದು ದೂರಿದರು.
ಬಿತ್ತನೆಯ ಸಮಯ ಪ್ರಾರಂಭವಾಗಿದ್ದರೂ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಡಿಎಪಿ ಗೊಬ್ಬರ ದೊರೆಯುತ್ತಿಲ್ಲ. ಬೆಂಬಲ ಬೆಲೆಯನ್ನೂ ನಿಗದಿಪಡಿಸಿಲ್ಲ. ದೇಶದಲ್ಲೇ ಅತ್ಯುತ್ತಮವಾದ ಕರ್ನಾಟಕ ರಾಜ್ಯದ ಮೆಣಸಿನಕಾಯಿಯನ್ನು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ರೈತರ ಬೆಳೆಗೆ ಬೆಂಬಲ ಬೆಲೆ ನೀಡಿ ಅವರ ರಕ್ಷಣೆಗೆ ಮುಂದಾಗಿದ್ದೆವು. ಇಡೀ ದೇಶಕ್ಕೆ ಇಲ್ಲಿನ ಮೆಣಸಿನಕಾಯಿ ಮಾದರಿ. ಎಪಿಎಂಸಿ ಬಂದ್ ಆಗಿದೆ. ಹೀಗಾಗಿ ರೈತರೊಂದಿಗೆ ನೇರವಾಗಿ ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೃಷಿ ಇಲಾಖೆ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಸರಕಾರ ರೈತರ ಬಳಿಗೆ ಹೋಗಿ ಅವರ ಸಮಸ್ಯೆ ಆಲಿಸಬೇಕು. ಕೃಷಿ ಕ್ಷೇತ್ರವು ಆರ್ಥಿಕವಾಗಿ ತೊಂದರೆಗೊಳಗಾಗಿದ್ದು, ಸಹಾಯಹಸ್ತ ಚಾಚುವ ಅವಶ್ಯಕತೆಯಿದೆ. ತರಕಾರಿ, ಹಣ್ಣು ಹಾಗೂ ಹೂವು ಬೆಳೆಗಾರರ ಕೊರೋನ ಪರಿಹಾರ ಪ್ಯಾಕೇಜ್ ಅನ್ನು ಪ್ರತಿ ಎಕರೆಗೆ ನಾಲ್ಕು ಸಾವಿರ ರೂ.ನಿಂದ 10 ಸಾವಿರ ರೂ.ಗಳಿಗೆ ಏರಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.
ಲಾಕ್ಡೌನ್ ವಿಚಾರವಾಗಿ ಸರಕಾರ ಯಾವ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಲಿ. ಆದರೆ, ನಷ್ಟ ಅನುಭವಿಸುವ ಜನರಿಗೆ, ಸಂಕಷ್ಟಕ್ಕೆ ಸಿಲುಕುವ ಪರಿಹಾರ ನೀಡಲಿ ಎಂದು ಒತ್ತಾಯಿಸಿದ ಅವರು, ಚಾಲಕ ವೃತ್ತಿಯು 25 ಲಕ್ಷ ಜನರ ನಿರುದ್ಯೋಗವನ್ನು ದೂರ ಮಾಡಿದೆ. ನಾನು ನನ್ನ ಚಾಲಕ ಇಲ್ಲದೆ ಹೊರಗೆ ಬರಲು ಸಾಧ್ಯವಿಲ್ಲ. ಚಾಲಕರ ಮೇಲೆ ನಾವು ಮಾನಸಿಕ ಒತ್ತಡ ಹಾಕಬಾರದು. ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಈ ಚಾಲಕರನ್ನು ಸರಕಾರ ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದರು.
ನೀವು ಎಷ್ಟಾದರೂ ಪರಿಹಾರ ಕೊಡಿ. ನಿಮ್ಮ ಪಾಲಿಕೆ ಸದಸ್ಯರು, ರೆವೆನ್ಯೂ ಇನ್ಸ್ಪೆಕ್ಟರ್ ಇಟ್ಟುಕೊಂಡು ಎಲ್ಲ ಊರಿನಲ್ಲಿರುವ ಚಾಲಕರಿಗೆ ಪರಿಹಾರ ಕೊಟ್ಟು ಬನ್ನಿ. ಅವನಿಗೆ ಆನ್ಲೈನ್ ಅರ್ಜಿ ಹಾಕುವ ಶಕ್ತಿ ಇದ್ದಿದ್ದರೆ ಅವನೇಕೆ ಚಾಲಕನಾಗುತ್ತಿದ್ದ? ನಾನು ಅವರ ಧ್ವನಿಯಾಗಿ ಇರುತ್ತೇನೆ ಎಂದ ಡಿ.ಕೆ.ಶಿವಕುಮಾರ್, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿ ಅಧಿಕಾರಿಗಳ ಮೂಲಕ ಪರಿಹಾರ ವಿತರಣೆ ಮಾಡಿ ಎಂದು ಆಗ್ರಹಿಸಿದರು.
ಅಧಿಕಾರಿ-ಜನಪ್ರತಿನಿಧಿಗಳ ತಿಕ್ಕಾಟ ನಿಲ್ಲಲಿ: ಅಧಿಕಾರಿ ಜನಪ್ರತಿನಿಧಿಗಳು ಜಗಳ ನಿಲ್ಲಿಸಿ ಸಂಕಷ್ಟಕ್ಕೆ ಸಿಲುಕಿರುವ ಜನರ ಬಗ್ಗೆ ಗಮನಹರಿಸಿ. ಅವರಿಗೆ ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಜತೆ ಮಾತನಾಡಿ ಪರಿಹಾರ ಕಂಡುಕೊಳ್ಳಲಿ. ನಿಮಗೆ ಬೇಕಾದಂತೆ ಐದು ನಿಮಿಷದಲ್ಲಿ ಅಧಿಕಾರಿ, ಮಂತ್ರಿಗಳನ್ನು ಬದಲಾವಣೆ ಮಾಡುತ್ತೀರಿ. ಅದೇ ರೀತಿ ನಿಮಗೆ ಬೇಕಾದವರನ್ನು ಕರೆತಂದು ಕೆಲಸ ಮಾಡಿ. ಜಿಲ್ಲಾಧಿಕಾರಿ ಮಾಡುವ ಕೆಲಸ ಪ್ರತಾಪ್ ಸಿಂಹ ಮಾಡಲು ಸಾಧ್ಯವಿಲ್ಲ, ಪ್ರತಾಪ್ ಸಿಂಹ ಮಾಡುವ ಕೆಲಸ ಜಿಲ್ಲಾಧಿಕಾರಿಗೆ ಮಾಡಲು ಸಾಧ್ಯವಿಲ್ಲ. ಈ ಜಗಳ ನೋಡಿ ಜನ ಉಗಿಯುತ್ತಿದ್ದಾರೆ. ಏನೇ ಸಮಸ್ಯೆ ಇದ್ದರೂ, ಸರಕಾರದ ನಿರ್ಧಾರ ಸರಿಯೋ ತಪ್ಪೇ? ಏನೇ ಆದರೂ ಅದನ್ನು ಜಾರಿ ಮಾಡಬೇಕಾಗಿರುವುದು ಜಿಲ್ಲಾಧಿಕಾರಿಯೇ ಎಂದು ಶಿವಕುಮಾರ್ ಹೇಳಿದರು.
ಮದ್ಯಕ್ಕೆ ಅವಕಾಶ, ರೈತರ ಬೆಳೆಗಿಲ್ಲ!
'ಹಿಂದಿನ ವರ್ಷ ಘೋಷಿಸಿದ್ದ ಕೋವಿಡ್ ಪರಿಹಾರವನ್ನು ನೀಡಿಲ್ಲ. ಸರಕಾರ ತರಕಾರಿ, ಹೂ, ಹಣ್ಣು ಬೆಳೆಗಾರರಿಗೆ ಹೆಕ್ಟೇರ್ಗೆ 10ಸಾವಿರ ರೂ.ಪರಿಹಾರ ಘೋಷಿಸಿದೆ. ಸಣ್ಣ ರೈತರು ಅರ್ಧ ಎಕರೆಯಲ್ಲಿ ಬೆಳೆ ಬೆಳೆಯುತ್ತಾರೆ. ಆತ ತನಗೆ ಬರುವ ಬಿಡಿಗಾಸಿಗೆ ಆನ್ಲೈನ್ನಲ್ಲಿ ಅರ್ಜಿ ಹಾಕಬೇಕಾ? ಯಾವ ಅಧಿಕಾರಿಯೂ ಈ ರೈತರನ್ನು ಭೇಟಿ ಮಾಡಿಲ್ಲ. ಸರಕಾರ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ್ದು, ರೈತರ ಬೆಳೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ಸರಕಾರ ಯಾರ ಪರವಾಗಿದೆ ಎಂಬುದನ್ನು ಇದು ತೋರಿಸುತ್ತದೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ