ಕೋವಿಡ್ ವಾರ್ಡ್‍ನಲ್ಲಿ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ ನಟ ಭುವನ್, ನಟಿ ಹರ್ಷಿಕಾ

Update: 2021-05-31 16:01 GMT

ಮಡಿಕೇರಿ, ಮೇ 31 : ಭುವನಂ ಫೌಂಡೇಶನ್ ಮೂಲಕ ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಆರೋಗ್ಯ ಸೇವೆ, ದಿನಸಿ ಕಿಟ್ ಸೇರಿದಂತೆ ನೆರವಿನ ಹಸ್ತ ಚಾಚಿರುವ ಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಅವರುಗಳು ಸೋಮವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೂ ಭೇಟಿ ನೀಡಿದರು.

ಪಿಪಿಇ ಕಿಟ್ ತೊಟ್ಟ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಎಲ್ಲಾ ವಾರ್ಡ್‍ಗಳಿಗೂ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ 400ಕ್ಕೂ ಹೆಚ್ಚು ಸೋಂಕಿತರ ಆರೋಗ್ಯ ವಿಚಾರಿಸಿದರು. ಯಾವುದೇ ಕಾರಣಕ್ಕೂ ಕೊರೋನ ಸೋಂಕಿಗೆ ಭಯ ಪಡಬೇಡಿ. ನಿಶ್ಚಿಂತೆಯಿಂದ ಚಿಕಿತ್ಸೆ ಪಡೆದು ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿ ಎಂದು ಹಾರೈಸಿದರು. ಮಕ್ಕಳು, ಮಹಿಳೆಯರು, ವಯೋವೃದ್ದರೂ ಕೂಡ ನಟ ನಟಿಯ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಕೋವಿಡ್ ವಾರ್ಡ್‍ನ ಒಳಗೆ ಕೊಡವ ವಾಲಗಕ್ಕೆ ಡ್ಯಾನ್ಸ್ ಮಾಡಿದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಸೋಂಕಿತರಿಗೂ ತಮ್ಮೊಂದಿಗೆ ಸ್ಟೆಪ್ ಹಾಕುವಂತೆ ಪ್ರೇರೇಪಿಸಿದರು. ಮಹಿಳೆಯರು ವಯೋವೃದ್ದರೂ ಕೂಡ ಕೊಡವ ವಾಲಗಕ್ಕೆ ಸ್ಟೆಪ್ ಹಾಕಿ ಕುಣಿದು ಸಂಭ್ರಮಿಸಿದರು.  

ಈ ಕುರಿತು ಮಾತನಾಡಿದ ಹರ್ಷಿಕಾ ಪೂಣಚ್ಚ, ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರು ಆತಂಕದಿಂದ ಚಿಕಿತ್ಸೆ ಪಡೆಯುತ್ತಾರೆ. ಅವರ ಮನಸಲ್ಲಿ ಮೂಡಿರುವ ಆತಂಕವನ್ನು ದೂರ ಮಾಡುವುದು ಹಾಗೂ ಅವರಿಗೂ ಮನರಂಜನೆ ನೀಡುವ ಉದ್ದೇಶದಿಂದ ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಮಾತ್ರವಲ್ಲದೇ ಎಲ್ಲಾ ಕೋವಿಡ್ ವಾರ್ಡ್‍ನಲ್ಲೂ ಕೊಡವ ವಾಲಗ ಹಾಗೂ ಚಿತ್ರಗೀತೆಗಳನ್ನು ಹಾಕಿ ಡ್ಯಾನ್ಸ್ ಮಾಡಿದ್ದು, ತಮ್ಮೊಂದಿಗೆ ಅವರೂ ಸ್ಟೆಪ್ ಹಾಕಿದ್ದಾರೆ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದು, ಮನರಂಜನೆ ನೀಡಿದ್ದು ವೈಯಕ್ತಿಕವಾಗಿ ಖುಷಿ ನೀಡಿದೆ ಎಂದು ಅನುಭವ ಹಂಚಿಕೊಂಡರು. 

ನಟ ಭುವನ್ ಪೊನ್ನಣ್ಣ ಮಾತನಾಡಿ ಯಾವುದೇ ಕಾರಣಕ್ಕೂ ಕೋವಿಡ್ ಸೋಂಕಿತರನ್ನು ಸಮಾಜದಿಂದ ದೂರ ಮಾಡಬೇಡಿ. ಕೋವಿಡ್ ಸೋಂಕು ಯಾರಿಗೂ ಬೇಕಾದರು ಬರಬಹುದು. ಹೀಗಾಗಿ ಕೋವಿಡ್ ಸೋಂಕಿಗೆ ತುತ್ತಾದವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಬೇಕು. ಕನಿಷ್ಟ ಪಕ್ಷ ದೂರವಾಣಿ ಕರೆ ಮಾಡಿ ಅವರಿಗೆ ಧೈರ್ಯ ತುಂಬುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಈ ಸಂದರ್ಭ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಲೋಕೇಶ್, ಡಾ. ಮಂಜುನಾಥ್, ಡಾ. ವಿಶಾಲ್ ಕುಮಾರ್, ಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷ ಚೈಯಂಡ ಸತ್ಯ, ಆಸ್ಪತ್ರೆ ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News