ಕಳಸ: ಭದ್ರಾ ನದಿಯಲ್ಲಿ ಈಜಲು ಹೋದ ಯುವಕ ನಾಪತ್ತೆ

Update: 2021-05-31 17:58 GMT

ಚಿಕ್ಕಮಗಳೂರು, ಮೇ 31: ನದಿಯಲ್ಲಿ ಈಜಲು ಹೋಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕಳಸ ಪಟ್ಟಣ ಸಮೀಪದ ಹಳುವಳ್ಳಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣ ಸಮೀಪದಲ್ಲಿರುವ ಅತ್ತಿಗುಂಡಿ ಗ್ರಾಮದ ನಿವಾಸಿ ರಾಜೇಶ್(29) ಈಜಲು ಹೋಗಿ ನಾಪತ್ತೆಯಾಗಿರುವ ಯುವಕನಾಗಿದ್ದು, ಈತ ಸೋಮವಾರ ಮಧ್ಯಾಹ್ನ ತನ್ನ ಸ್ನೇಹಿತನೊಂದಿಗೆ ಹಳುವಳ್ಳಿ ಗ್ರಾಮದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಈಜಲು ತೆರಳಿದ್ದಾನೆ. ಸ್ನೇಹಿತನೊಂದಿಗೆ ನದಿಗಿಳಿದ ಯುವಕ ನದಿ ನೀರಿನ ಹರಿವಿನ ವೇಗ ಅರಿಯದೇ ನದಿಯ ಮಧ್ಯೆ ತೆರಳಿದ್ದು, ಈ ವೇಳೆ ನೀರಿನ ಸುಳಿಗೆ ಸಿಲುಕಿದ್ದು, ಅಲ್ಲಿಂದ ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಈತನ ಸ್ನೇಹಿತ ಈಜಿ ದಡ ಸೇರಿದ್ದಾನೆಂದು ತಿಳಿದುಬಂದಿದೆ.

ಈಜಲು ಹೋಗಿದ್ದ ಯುವಕನ ಸುಳಿವು ಸಂಜೆಯಾದರೂ ಪತ್ತೆಯಾಗಿಲ್ಲ. ಕೂಡಲೇ ಸ್ಥಳೀಯ ಮುಳುಗುತಜ್ಞ ಭಾಸ್ಕರ್ ಎಂಬವರು ನೀರಿಗಿಳಿದು ಯುವಕನಿಗಾಗಿ ಹುಡುಕಾಡಿದರೂ ಯುವಕನ ಸುಳಿವು ಸಿಕ್ಕಿಲ್ಲ. ಬಳಿಕ ಕಳಸ ಪೊಲೀಸರು, ಮೂಡಿಗೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಮಿಸಿ ಯುವಕನ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News