25 ಸಂಸದರು ರಾಜೀನಾಮೆ ಕೊಟ್ಟು ರಾಜ್ಯ ಉಳಿಸಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

Update: 2021-06-01 13:16 GMT

ಬೆಂಗಳೂರು, ಜೂ. 1: `ಕಳೆದ ವರ್ಷ ಪ್ರವಾಹದಿಂದ 24 ಸಾವಿರ ಕೋಟಿ ರೂ. ನಷ್ಟವಾದರೂ ಕೇಂದ್ರ ಕೊಟ್ಟಿದ್ದು 577 ಕೋಟಿ ರೂ.ಮಾತ್ರ. ಆಗಲೂ ಬಾಯಿ ಬಿಡದೆ ಮೌನ ಧರಿಸಿದ್ದ ಸಂಸದರು, ಈಗಲೂ ಕೇಂದ್ರದ ಮುಂದೆ ಕೈಕಟ್ಟಿ ಗುಲಾಮತನ ತೋರುತ್ತಿದ್ದಾರೆ. ರಾಜ್ಯದ ಹಿತಚಿಂತನೆ ಇಲ್ಲದ ಇವರಿಗೆ ಜನರೇ ಪಾಠ ಕಲಿಸುತ್ತಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, "ಸಣ್ಣ ರಾಜ್ಯ ಉತ್ತರಾಖಂಡಕ್ಕೇ ಕೇಂದ್ರ 375 ಕೋಟಿ ರೂ.ಬಿಡುಗಡೆ ಮಾಡಿದೆ. ಕೇಂದ್ರದ ದೃಷ್ಟಿಯಲ್ಲಿ ಕರ್ನಾಟಕ ಅದಕ್ಕಿಂತ ಕಡೆಯಾಯಿತೇ, 2021-22ನೆ ಸಾಲಿಗೆ ರಾಜ್ಯಕ್ಕೆ ಎಸ್‍ಡಿಆರ್‍ಎಫ್‍ನಡಿ 1,264 ಕೋಟಿ ರೂ.ಲಭಿಸಲಿದೆ. ಇದು ಕೋವಿಡ್ ನಿರ್ವಹಣೆಗಷ್ಟೇ ಅಲ್ಲ, ರಾಜ್ಯ ಎದುರಿಸಬಹುದಾದ ಇತರ ವಿಪತ್ತಿಗೂ ಅನ್ವಯಿಸುತ್ತದೆ. ರಾಜ್ಯವನ್ನು ದೇವರೇ ಕಾಪಾಡಬೇಕು" ಎಂದು ಹೇಳಿದ್ದಾರೆ.

`ಕೋವಿಡ್-19 ವಿರುದ್ಧದ ಹೋರಾಡಲೂ ಬಿಜೆಪಿ ನೇತೃತ್ವದ ಸರಕಾರದ ಬಳಿ ಹಣವಿಲ್ಲ, ಲಸಿಕೆ ತರಿಸಲೂ ಹಣವಿಲ್ಲದೆ ಜನರನ್ನು ಸೋಂಕಿನ ಕೂಪಕ್ಕೆ ನೀಡುತ್ತಿದೆ. ಕೇಂದ್ರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಈಗಲಾದರೂ ರಾಜ್ಯ ಬಿಜೆಪಿ 25 ಸಂಸದರು ಧೈರ್ಯ ಮಾಡಿ ಒಂದು ಧ್ವನಿಯಲ್ಲಿ ರಾಜ್ಯವನ್ನು ರಕ್ಷಿಸಲಿ, ಇಲ್ಲ ರಾಜೀನಾಮೆ ಕೊಟ್ಟು ರಾಜ್ಯ ಉಳಿಸಲಿ' ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

`ಕೇಂದ್ರ ಸರಕಾರ ರಾಜ್ಯ ವಿಪತ್ತು ಸ್ಪಂದನಾ ನಿಧಿಯಡಿ ಕೇವಲ 316 ಕೋಟಿ ರೂ. ಮಾತ್ರ ನೀಡಿದೆ. ಮಹಾರಾಷ್ಟ್ರಕ್ಕೆ 1,289 ಕೋಟಿ ರೂ., ಆಂಧ್ರಕ್ಕೆ 447 ಕೋಟಿ ರೂ. ತಮಿಳುನಾಡಿಗೆ 408 ಕೋಟಿ ರೂ. ಬಿಡುಗಡೆ ಮಾಡಿರುವ ಸರಕಾರ ಕರ್ನಾಟಕ ರಾಜ್ಯದ ಬಗ್ಗೆ ಏಕೆ ಈ ಮಲತಾಯಿ ಧೋರಣೆ ತಾಳಿದೆ?' ಎಂದು ಈಶ್ವರ್ ಖಂಡ್ರೆ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

`ಕೇಂದ್ರದಿಂದ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ. ಪ್ರವಾಹ ಪರಿಹಾರ ನೀಡಿಕೆ, ಆಕ್ಸಿಜನ್, ರೆಮ್‍ಡೆಸಿವಿರ್, ಆಂಫೋಟೆರಿಸಿನ್-ಬಿ, ಹಂಚಿಕೆ ಬಳಿಕ ಈಗ ಎಸ್‍ಡಿಆರ್‍ಎಫ್ ಕಂತು ಬಿಡುಗಡೆಯಲ್ಲೂ ಅನ್ಯಾಯವಾಗಿದೆ. ರಾಜ್ಯದ ಬಿಜೆಪಿ 25 ಸಂಸದರಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ನಾಚಿಕೆಗೇಡಿನ ಸಂಗತಿ' ಎಂದು ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News