ಸಚಿವ ಸ್ಥಾನದಿಂದ ಸಿ.ಪಿ.ಯೋಗೇಶ್ವರ್ ರನ್ನು ವಜಾ ಮಾಡಿ, ಮೆಗಾಸಿಟಿ ಹಗರಣದಲ್ಲಿ ಬಂಧಿಸಬೇಕು: ಶಾಸಕ ರೇಣುಕಾಚಾರ್ಯ
ದಾವಣಗೆರೆ: ಸಿಎಂ ಯಡಿಯೂರಪ್ಪ ಪಕ್ಷ ಸಂಘಟನೆ, ಹೋರಾಟದಿಂದ ಬಂದಂತಹ ನಾಯಕ. ಇಂತಹ ನಾಯಕನ ಬೆನ್ನಿಗೆ ಚೂರಿ ಹಾಕಿದರೆ ನಾವು ಬಿಟ್ಟು ಬಿಡುತ್ತೇವೆಯೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಯಡಿಯೂರಪ್ಪಗೆ ಹೆದರಿಕೆ ಇಲ್ಲ. ಈಗ ಕೊರೋನ ಸಂಕಷ್ಟದಲ್ಲಿದ್ದೇವೆ. ಇದು ಮುಗಿಯಲಿ ನಾವು ರಾಜಕಾರಣ ಮಾಡುತ್ತೇವೆ. ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು 65 ಶಾಸಕರು ಸಹಿ ಮಾಡಿ ಪತ್ರ ನೀಡಿದ್ದಾರೆ ಎಂದರು.
ಸಚಿವ ಸ್ಥಾನದಿಂದ ಸಿ.ಪಿ.ಯೋಗೇಶ್ವರ್ ಅವರನ್ನು ವಜಾ ಮಾಡಬೇಕು. ಮೆಗಾಸಿಟಿ ಹಗರಣದಲ್ಲಿ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯಡಿಯೂರಪ್ಪ ಬೆನ್ನಿಗೆ ನಾವೆಲ್ಲಾ ಶಾಸಕರೂ ಇದ್ದೇವೆ ಎಂದರು.
ಯೋಗೇಶ್ವರ್ ಅವರಿಗೆ ಜಲ ಸಂಪನ್ಮೂಲ ಹಾಗೂ ಇಂಧನ ಖಾತೆಗಳ ಜೊತೆಗೆ ರಾಮನಗರ ಜಿಲ್ಲಾ ಉಸ್ತುವಾರಿ ಬೇಕಾಗಿತ್ತು. ಆದರೆ, ಅದು ಸಿಕ್ಕಿಲ್ಲ. ಇದೇ ಕಾರಣಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ, ಅಲ್ಲಿ ಪೋಟೋ ತೆಗೆಸಿಕೊಂಡು, ಮುಖ್ಯಮಂತ್ರಿ ಬದಲಾವಣೆ ಅಂತಾ ಗಾಸಿಫ್ ಹರಡುತ್ತಿದ್ದಾರೆ ಎಂದು ಕಿಡಿಕಾರಿದರು.