×
Ad

ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಮಕ್ಕಳ ರಕ್ಷಣಾ ಆಯೋಗದಿಂದ ದೂರು

Update: 2021-06-03 19:05 IST
ವರ್ತಿಕಾ ಕಟಿಯಾರ್

ಬೆಂಗಳೂರು, ಜೂ.3: ಅಧಿಕಾರ ಬಳಸಿ ತನ್ನ ಪತ್ನಿಗೆ ಮಗು ನೋಡಲು ಬಿಡದೆ ಕಾನೂನು ಉಲ್ಲಂಘಿಸಿರುವ ಆರೋಪ ಸಂಬಂಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ರಕ್ಷಣಾ ಅಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದೆ.

ಭಾರತೀಯ ವಿದೇಶಾಂಗ ಇಲಾಖೆ(ಐಎಎಸ್) ಅಧಿಕಾರಿ ನಿತೀನ್ ಶುಭಾಶ್ ಅವರು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಮೊರೆ ಹೋಗಿ, 'ವರ್ತಿಕಾ ಕಟಿಯಾರ್ ತನ್ನ ಅಧಿಕಾರ ಹಾಗೂ ಪ್ರಭಾವ ಬೆಳೆಸಿಕೊಂಡು ಮಗನನ್ನು ನೋಡಲು ಬಿಡುತ್ತಿಲ್ಲ' ಎಂದು ಆರೋಪಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಆಯೋಗ, ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರವೀಣ್ ಸೂದ್‍ಗೆ ದೂರು ಸಲ್ಲಿಕೆ ಮಾಡಿದೆ.

ಈ ಹಿಂದೆ ವರ್ತಿಕಾ ಕಟಿಯಾರ್ ಅವರು ತಮ್ಮ ಪತಿ ನಿತೀನ್ ಶುಭಾಶ್ ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು.

ತನ್ನ ಪತಿ ಮದ್ಯಪಾನ, ಧೂಮಪಾನ ಮಾಡುವ ಅತಿಯಾದ ಚಟ ಬೆಳೆಸಿಕೊಂಡಿದ್ದ. ಇದನ್ನು ತ್ಯಜಿಸುವಂತೆ ಹಲವು ಬಾರಿ ಹೇಳಿದಾಗಲೂ ಜಗಳ ಮಾಡಿ ಹಲ್ಲೆ ಮಾಡಿದ್ದರು. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದು ಹೋಗಿತ್ತು ಎಂದೂ ಆರೋಪಿಸಿದ್ದರು.

ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದರು. ಅಲ್ಲದೇ ಹಣಕ್ಕಾಗಿ ಪದೇ ಪದೆ ಪೀಡಿಸುತ್ತಿರುವುದಾಗಿ ಆರೋಪಿಸಿದ್ದರು. ತನ್ನ ಅಜ್ಜಿಯ ಬಳಿ ಪತಿ ಐದು ಲಕ್ಷದ ಚೆಕ್ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.

ಕೃತ್ಯದ ಆಧಾರದ ಮೇಲೆ ದೆಹಲಿ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿತ್ತು. ಈ ಬೆಳವಣಿಗೆ ಬಳಿಕ ಪತ್ನಿ ವರ್ತಿಕಾ ತನ್ನ ಮಗನನ್ನು ನೋಡಲು ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗಕ್ಕೆ ಪತಿ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News